ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಪಟ್ಟಣದ ಕೆಜಿಎಂಎಸ್ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಯಿತು.
ಮುಖ್ಯ ಶಿಕ್ಷಕ ಬಿ.ಬಿ. ಕುರಿ ಮಾತನಾಡಿ, ಕೆಂಪೇಗೌಡರು ಇಂದು ನಾವು ಬೆಂಗಳೂರು ಎಂದು ಕರೆಯುವ ಬೃಹತ್ ಪಟ್ಟಣವನ್ನು ಬೆಂದಕಾಳೂರು ಎಂಬ ಹೆಸರಿನಲ್ಲಿ ಸ್ಥಾಪಿಸಿದರು. ದೂರ ದೃಷ್ಟಿಯನ್ನಿಟ್ಟುಕೊಂಡು ಸ್ಥಾಪಿಸಿದ ಈ ಪಟ್ಟಣವಿಂದು ನಮ್ಮ ರಾಜ್ಯದ ರಾಜಧಾನಿಯಾಗಿ ಮೆರೆಯುತ್ತಿದೆ. ಈ ಬೆಂದಕಾಳೂರಿನಲ್ಲಿ ಅವರು ನೀರಿನ ಕೊರತೆಯಾಗಬಾರದೆಂದು ಸಾವಿರಾರು ಕೆರೆಗಳನ್ನು ನಿರ್ಮಿಸಿದರು. ಪಟ್ಟಣದ ಎಲ್ಲ ಸ್ಥಳಗಳಲ್ಲಿ ಉದ್ಯಾನವನಗಳನ್ನು ನಿರ್ಮಿಸುವ ಮೂಲಕ ಬೆಂಗಳೂರಿಗೆ ಉದ್ಯಾನಗಳ ನಗರಿ ಎಂಬ ಹೆಸರು ಬರಲು ಕಾರಣೀಕರ್ತರಾದರು. ಅಂಥವರ ಜನ್ಮ ದಿನವನ್ನು ಆಚರಿಸುವ ಮೂಲಕ ನಾಡಿನ ಜನತೆ ಇಂದು ಅವರಿಗೆ ತನ್ನ ಗೌರವವನ್ನು ಸಮರ್ಪಣೆ ಮಾಡುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಎಲ್.ಎನ್ ಚವ್ಹಾಣ, ಅಣಗೌಡ್ರ, ಎಸ್.ಐ. ಜಗಾಪೂರ, ಲಕ್ಷ್ಮೀ ವಡ್ಡರ, ರಾಜೇಶ್ವರಿ ತೊಂಡಿಹಾಳ ಮತ್ತು ಶಿಕ್ಷಕರಾದ ಎಂ.ಎಸ್. ಮಾಳಶೆಟ್ಟಿ, ಡಿ.ವಿ. ಕಳ್ಳಿ, ಜೆ.ಎ. ಪಾಟೀಲ ಮತ್ತು ವಿದ್ಯಾರ್ಥಿಗಳಿದ್ದರು.