ಹಾವೇರಿ:– ಬಿಜೆಪಿ ಮುಖಂಡ ರವಿಕುಮಾರ್ ಗೆ ಆತ್ಮಸಾಕ್ಷಿ ಇದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಸಚಿವ ಹೆಚ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ MLC ರವಿಕುಮಾರ್ ನೀಡಿದ ಅವಹೇಳನಕಾರಿ ಹೇಳಿಕೆಗೆ ರಾಣೆಬೆನ್ನೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಹೆಚ್ ಕೆ ಪಾಟೀಲ್, ಬಿಜೆಪಿ ಎಂ.ಎಲ್ ಸಿ ರವಿಕುಮಾರ್ ವಿರುದ್ದ ಕಿಡಿಕಾರಿದರು.
ಇದು ಆತ್ಯಂತ ದುರ್ದೈವ. ಶಾಸನ ಸಭೆ ಸದಸ್ಯರು, ಬಿಜೆಪಿ ನಾಯಕರು ಹಿರಿಯ ಅಧಿಕಾರಿಯೊಬ್ಬರ ಮೇಲೆ ಲಘುವಾಗಿ ಮಾತಾಡಿರೋದು ನೀಚ ಕೆಲಸ. ಮಹಿಳೆಯರಿಗೆ ಸಣ್ಣ ಅಗೌರವ ಆದರೂ ನಮ್ಮ ಸಮಾಜ ಸಹಿಸಲ್ಲ. ಈ ಲಘುವಾದ , ಅವಮಾನಕರ ಮಾತನ್ನು ನಾವು ತೀವ್ರವಾಗಿ ಖಂಡನೆ ಮಾಡಲೇಬೇಕು. ರವಿ ಕುಮಾರ್ ಅವರಿಗೆ ಆತ್ಮ ಸಾಕ್ಷಿ ಇದ್ದರೆ ಕ್ಷಮೆ ಕೇಳಲಿ. ಅದೂ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಅಪೇಕ್ಷೆ ಪಡುತ್ತೇನೆ. ಇಲ್ಲದಿದ್ದರೆ ಜನರಿಗೆ ಅವಮಾನ ಮಾಡಿದ ಹಾಗೆ ಎಂದರು.
RSS ಬ್ಯಾನ್ ವಿಚಾರಕ್ಕೆ ಹೆಚ್ ಕೆ ಪಾಟೀಲ್ ಹೇಳಿದ್ದೇನು?
ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂಬ ಸಚಿವ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿ, ಅದನ್ನ ಅವರ ಹತ್ರ ಕೇಳಬೇಕು. ಆರ್ ಎಸ್ ಎಸ್ ಸಂಘಟನೆ ಬಿಜೆಪಿ ಉಪಯೋಗಿಸಿಕೊಂಡು ಸಮಾಜ ವಿಭಜನೆ ಮಾಡ್ತಿದೆ ಅಂತ ಬಿಜೆಪಿ ನಾಯಕರೇ ಹೇಳ್ತಾರೆ. ಅದಕ್ಕಾಗಿ ಆ ಹೇಳಿಕೆ ಕೊಟ್ಟಿರಬಹುದು ಎಂದರು.
ಸಿಎಂ ಬದಲಾವಣೆ ವಿಚಾರವಾಗಿ ಮಾತಾಡಲ್ಲ:
ಸಿಎಂ ಬದಲಾವಣೆ ವಿಚಾರವಾಗಿ ನನ್ನ ಪ್ರಾರ್ಥನೆ ಫಲಿಸಬಹುದು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಇಷ್ಟೇ ಹೇಳ್ತಿನಿ ನಮ್ಮ ಮುಖ್ಯಸ್ಥರು ಮಲ್ಲಿಕಾರ್ಜುನ ಖರ್ಗೆಯವರು. ಸಿಎಂ ಬದಲಾವಣೆ ವಿಚಾರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಯಾರೂ ಮಾತಾಡತಕ್ಕದಲ್ಲ ಎಂದು ಖರ್ಗೆಯವರು ಹೇಳಿದ್ದಾರೆ. ಅವರ ಮಾತು ನಮಗೆ ಆದೇಶ ಇದ್ದಂತೆ ಎಂದರು.
ದಿವಾಳಿ ಆಗಿರೋದು ನೀವು:
ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರಿ ನೌಕರರಿಗೂ ಸಂಬಳ ಕೊಡಲಾಗುತ್ತಿಲ್ಲ ಎಂಬ ಬಿ.ವೈ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಗಾರ ನಿಂತಿದ್ರೆ ಸುಮ್ಮನಿರ್ತಿದ್ರಾ? ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ಮಾಡಿದೆವು. ಆ ಪ್ರದೇಶಕ್ಕೆ ಅಂತಾನೇ 34 ಕೋಟಿ ಮಂಜೂರು ಮಾಡಿದ್ದೆವು. ಇದು ಬಿಜೆಪಿಯವರಿಗೆ ಕಾಣಲ್ಲವಾ? ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎನ್ನುತ್ತೀರಿ. ನೀವು 5000 ಕೋಟಿ ರೂ ಭದ್ರಾ ಕಾಲುವೆ ಅಭಿವೃದ್ಧಿಗೆ ಕೊಡುತ್ತೇವೆಂದು ಬಜೆಟ್ ನಲ್ಲಿ ಹೇಳಿದ್ದೀರಿ, ಆದರೆ ಕೊಡಿಸಿದ್ರಾ? ಕಾನೂನು ಪ್ರಕಾರ ಕೊಟ್ಟರಾ? ದಿವಾಳಿ ನೀವು ಆಗಿದ್ದೀರಿ ಎಂದು ಟೀಕೆ ಮಾಡಿದರು.
ಆರ್ಥಿಕವಾಗಿ ಅನುಕೂಲತೆಯಿಂದ ನಡೆದಿದ್ದೇವೆ. ಬಿಜೆಪಿಯವರಿಗೆ ಅಸೂಯೆಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡ ಬಲ್ಲಿದರ ಬಡತನದ ಬೇರನ್ನು ಕಿತ್ತು ಹಾಕುತ್ತಿದ್ದೇವೆ. ಬಡವರನ್ನು ಜಿರೋ ಪರ್ಸೆಂಟ್ ಮಾಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಸುಮಾರು 98.5 % ಜನರಿಗೆ ನಮ್ಮ ಯೋಜನೆಗಳ ಪ್ರತಿಫಲ ಮುಟ್ಟಿದೆ ಎಂದು ಎಚ್ ಕೆ ಪಾಟೀಲ್ ಹೇಳಿದರು.
ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ;
ರಾಜ್ಯದಲ್ಲಿ 2026ಕ್ಕೆ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ತಿರುಕನ ಕನಸು ಕಾಣುತ್ತಿದ್ದಾರೆ ಎಂದರು.
ಸರ್ಕಾರದ ಬಹಳಷ್ಟು ಕೇಸ್ ಗಳಿಗೆ ಸೋಲು:
ಇನ್ನೂ ನ್ಯಾಯಾಲಯದಲ್ಲಿರುವ ಪ್ರಕರಣಗಳ ಬಗ್ಗೆ ಸರ್ಕಾರದ ಪರವಾಗಿ ಸಮರ್ಥ ವಾದ ನಡೆಯುತ್ತಿಲ್ಲ ಎಂಬ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಸಿಎಂ ಹಾಗೂ ಅಡಿಷನಲ್ ಅಡ್ವೊಕೇಟ್ ಜನರಲ್ ಚರ್ಚೆ ಮಾಡ್ತಿದ್ದೀವಿ. ಈ ಬಗ್ಗೆ ಗಂಭೀರವಾಗಿ ಪರಿಗಣನೆ ಮಾಡಿದ್ದೇವೆ. ಸರ್ಕಾರದ ಬಹಳಷ್ಟು ಕೇಸ್ ಗಳು ಸೋಲು ಆಗ್ತಿದೆ ಎಂಬ ಅಂಶಗಳು ಬಂದಿದೆ. ಖಂಡಿತವಾಗಿ ಈ ಬಗ್ಗೆ ಒಂದು ನಿರ್ಧಾರ ತಗೊಳ್ತೀವಿ ಎಂದರು.