ಬೆಂಗಳೂರು:- ಕ್ಷುಲ್ಲಕ ವಿಚಾರಕ್ಕೆ ಮಾಡೆಲ್ ಗೆ ಬಸ್ ಸಿಬ್ಬಂದಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ.
ಧ್ರುವ್ ನಾಯ್ಕ್ ಹಲ್ಲೆಗೊಳಗಾದ ಮಾಡೆಲ್. ಮಾಡೆಲ್ ಆಗಿರುವ ಧ್ರುವ್ ನಾಯ್ಕ್, ಥಾಯ್ ಲ್ಯಾಂಡ್ಗೆ ಹೋಗಿ ಜುಲೈ 1 ರಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಖಾಸಗಿ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ರಾತ್ರಿ 11.30ಕ್ಕೆ ಬೆಂಗಳೂರಿನಿಂದ ತಮ್ಮೂರು ಹುಬ್ಬಳ್ಳಿಗೆ ಹೋಗಲು ಸೀ ಬರ್ಡ್ ಬಸ್ ಬುಕ್ ಮಾಡಿದ್ದಾರೆ. ರಾತ್ರಿ ಬಸ್ ಏರಲು ಬಂದವರು ನರಕ ಕಾಣುವಂತಾಗಿದೆ.
ರಾತ್ರಿ 1 ಗಂಟೆಗೆ ತನ್ನ ಸ್ನೇಹಿತರ ಜೊತೆಗೆ ಊರಿಗೆ ತೆರಳಲು ಆನಂದ್ ರಾವ್ ಸರ್ಕಲ್ ಬಳಿಗೆ ಧ್ರುವ್ ನಾಯ್ಕ್ ಬಂದಿದ್ದರು. ಹೀಗೆ ಬಂದವರು ಓರ್ವ ಸ್ನೇಹಿತನ ಜೊತೆಗೆ ಕೆಳ ನಿಂತು ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಬಸ್ ಬಾಗಿಲು ಬಂದ್ ಮಾಡಿದ ಚಾಲಕ ಬಸ್ ನಿಧಾನವಾಗಿ ಮೂವ್ ಮಾಡಿದ್ದ, ಈ ವೇಳೆ ಧ್ರುವ ಕೈ ಅಡ್ಡಗಟ್ಟಿ ನಾನು ಬರೋದಿದೆ ಬಸ್ ನಿಲ್ಲಿಸಿ ಎಂದಿದ್ದಾರೆ. ಈ ವೇಳೆ ಸೀ ಬರ್ಡ್ ಸಿಬ್ಬಂದಿ ಮತ್ತು ಧ್ರುವ ನಾಯ್ಕ್ ಮಧ್ಯೆ ಗಲಾಟೆ ಉಂಟಾಗಿದೆ.
ಇದೇ ವೇಳೆ ಸಿಬ್ಬಂದಿಗಳೆಲ್ಲಾ ಸೇರಿ ಧ್ರುವ್ ನಾಯ್ಕ್ ಮೇಲೆ ಹಲ್ಲೆ ಮಾಡಿದ್ದಾರೆ. ಮುಖ, ಕತ್ತು, ಎದೆ, ಭಾಗಕ್ಕೆ ಪರಚಿದ ಗುರುತಾಗಿದ್ದು, ಬೆನ್ನು ಮತ್ತು ಭುಜದ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಇದೇ ವೇಳೆ ದುಬಾರಿ ಬೆಲೆಯ ಶೂ, ಏರ್ ಬರ್ಡ್ಸ್, 44 ಸಾವಿರ ರೂ ಬೆಲೆ ಸನ್ ಗ್ಲಾಸ್, 1.85 ಲಕ್ಷ ರೂ ಬೆಲೆಯ ಪ್ಲಾಟಿನಂ ಪೆಂಡೆಂಟ್ ಇರುವ ಸಿಲ್ವರ್ ಚೈನ್, ಪಾಸ್ ಪೋರ್ಟ್, 45 ಸಾವಿರ ರೂ ಬೆಲೆಯ ವಾಚ್, 40 ಸಾವಿರ ರೂ ಮೌಲ್ಯದ ಪ್ಲಾಟಿನಂ ರಿಂಗ್ ಸೇರಿದಂತೆ ಪರ್ಸ್ನಲ್ಲಿದ್ದ 10 ಸಾವಿರ ರೂ ಹಣ ಕದ್ದಿರುವುದಾಗಿ ಧ್ರುವ್ ನಾಯ್ಕ್ ಆರೋಪಿಸಿದ್ದಾರೆ.
ಘಟನೆ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆದರೆ ಪೊಲೀಸರು ಮಾತ್ರ ತನಿಖೆ ಆರಂಭಿಸದೇ, ಸಿಸಿಟಿವಿ ಪರಿಶೀಲನೆ ಕೂಡ ನಡೆಸದೇ ಬೇಜವಾಬ್ದಾರಿ ತೋರಿದ್ದಾರೆ ಎಂದು ಧ್ರುವ್ ನಾಯ್ಕ್ ಪರ ವಕೀಲರು ಆರೋಪಿಸಿದ್ದು, ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.