ವಿಜಯಸಾಕ್ಷಿ ಸುದ್ದಿ, ಗದಗ: ಗುರುಪೂರ್ಣಿಮೆಗೆ ಧಾರ್ಮಿಕ ಹಾಗೂ ಶೈಕ್ಷಣಿಕ ಮಹತ್ವವಿದೆ. ಗುರು ಎಂದರೆ ಅಂಧಕಾರ, ಅಜ್ಞಾನವನ್ನು ದೂರ ಮಾಡುವವರು ಎಂಬ ನಂಬಿಕೆ ಬಹುತೇಕರದ್ದು. ಗುರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂಬ ನಂಬಿಕೆಯಿಂದ ನಾವೆಲ್ಲ ಜೀವನ ನಡೆಸುತ್ತಿದ್ದೇವೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಪ.ಪೂ ಕಲ್ಲಯ್ಯಜ್ಜನವರು ಹೇಳಿದರು.
ಅವರು ಗುರುವಾರ ಗದಗ ಜಿಲ್ಲಾ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಸಂಘಟನೆಯಿಂದ ಗದುಗಿನ ವಿರೇಶ್ವರ ಪುಣ್ಯಾಶ್ರಮದಲ್ಲಿ ಜರುಗಿದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಜೀವನದಲ್ಲಿ ಸರಿಯಾದ ಮಾರ್ಗ ತೋರಬಲ್ಲವನೇ ಗುರು. ಈ ಎರಡಕ್ಷರದಲ್ಲಿ ಗುರು-ಶಿಷ್ಯರ ಬಾಂಧವ್ಯವಿದೆ. ಮನುಷ್ಯನ ಸಾವಿರಾರು ತೊಂದರೆಗಳಿಗೆ ಸರಿಯಾದ ಮಾರ್ಗಗಳನ್ನು, ನ್ಯಾಯ-ನೀತಿ, ಧರ್ಮ-ಸಂಸ್ಕೃತಿಯ ಹಾದಿಯನ್ನು ತೋರಿ ಅವರನ್ನು ಸದ್ವಿಚಾರಿಗಳನ್ನಾಗಿ ಮಾಡುವವನೇ ಗುರುವಾಗಿದ್ದಾನೆ ಎಂದರು.
ಗದಗ ಜಿಲ್ಲಾ ಜೇಂಟ್ಸ್ ಗ್ರುಪ್ ಆಫ್ ಸಖಿ ಸಹೇಲಿ ಅಧ್ಯಕ್ಷೆ ಸುಮಾ ಪಾಟೀಲ ಮಾತನಾಡಿ, ಮನುಷ್ಯನ ಭವದ ತೊಂದರೆಗಳಿಗೆ ಸರಿಯಾದ ಬೋಧನೆಯ ಮೂಲಕ ಸೂಕ್ತವಾದ ದಾರಿಯನ್ನು ತೋರಿ, ಉತ್ತಮರನ್ನಾಗಿ ಮಾಡುವ ಕೆಲಸ ಗುರುವಿನಿಂದ ನಡೆಯುತ್ತದೆ ಎಂದರು.
ನಿರ್ಮಲಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಕಲಾ ಮಾಲೀಪಾಟೀಲ ಹಾಗೂ ಮಾಧುರಿ ಮಾಳೆಕೊಪ್ಪ ಪ್ರಾರ್ಥಿಸಿದರು. ಅಶ್ವಿನಿ ಮಾದಗುಂಡಿ ಸ್ವಾಗತಿಸಿದರು. ಚಂದ್ರಕಲಾ ಸ್ಥಾವರಮಠ ನಿರೂಪಿಸಿದರು. ಪ್ರಿಯಾಂಕಾ ಹಳ್ಳಿ ನಿರೂಪಿಸಿದರು. ವಿದ್ಯಾ ಶಿವನಗುತ್ತಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಧು ಕರಿಬಿಷ್ಠಿ, ರೇಖಾ ರೊಟ್ಟಿ, ಸುಷ್ಮೀತಾ ವೆರ್ಣಕರ, ಸುಗ್ಗಲಾ ಯಳಮಲಿ, ಶೋಭಾ ಹಿರೇಮಠ, ಶ್ರೀದೇವಿ ಮಹೇಂದ್ರಕರ, ಪದ್ಮಿನಿ ಮುಂತಾದವರು ಉಪಸ್ಥಿತರಿದ್ದರು.