ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯದಲ್ಲಿನ 8 ಜಿಲ್ಲೆಗಳಲ್ಲಿ ಅಂದುಕೊಂಡಂತೆ ಸೋಂಕು ನಿಂತಿಲ್ಲ. ಹೀಗಾಗಿ ಆ 8 ಜಿಲ್ಲೆಗಳಲ್ಲಿ ಒಂದು ವಾರ ಲಾಕ್ ಡೌನ್ ಮುಂದುವರೆಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ಹೀಗಾಗಿ ಜೂ. 14ರ ನಂತರವೂ ಈ ಈ 8 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆಯಲಿದೆ.
ಸೋಂಕು ಹೆಚ್ಚಿರುವ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಇತರ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಸಭೆ ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಲ್ಲಿನ ಕೋವಿಡ್ ಪರಿಸ್ಥಿತಿ ಹೇಗಿದೆಯಂಬ ಮಾಹಿತಿ ಪಡೆದರು.
ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಮಂಡ್ಯ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ ಸಿಎಂ ಯಡಿಯೂರಪ್ಪ ಅವರು ಈ 8 ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಎಂಟು ಜಿಲ್ಲೆಗಳಲ್ಲಿ ಸೋಂಕು ಕಡಿಮೆಯಾಗಿದೆಯಾದರೂ, ಪಾಸಿಟಿವಿ ದರ ಇಳಿಕೆಯಾಗಿಲ್ಲ. ಈ ಅಂಶ ಸರ್ಕಾರವನ್ನು ಗಾಢವಾಗಿ ಕಾಡುತ್ತಿದೆ. ಹಾಗಾಗಿ, ಮುಖ್ಯಂತ್ರಿಗಳು ಲಾಕ್ ಡೌನ್ ಹಿಂಪಡೆವ ಕುರಿತು ಆಯಾ ಜಿಲ್ಲಾಧಿಕಾರಿಗಳ ಅಭಿಪ್ರಾಯವನ್ನೇ ಮೊದಲು ಕೇಳಿದರು. ಬಹುತೇಕ ಎಲ್ಲ ಎಂಟು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಮುಂದುವರಿಸುವ ಇರಾದೆ ವ್ಯಕ್ತಪಡಿಸಿದರು ಎನ್ನಲಾಗಿದೆ.
ಸಭೆಯಲ್ಲಿ ಹಾಜರಿದ್ದ ತಜ್ಞರು ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಲಾಕ್ ಡೌನ್ ಸಡಿಲಗೊಳಿಸಿದರೆ, ಸೋಂಕು ಮತ್ತೆ ಏರಿಕೆಯಾಗುವ ಸಂಭವವಿದೆ. ಹಾಗಾಗಿ ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆ ಬರುವವರೆಗೂ ಕಠಿಣ ಲಾಕ್ ಡೌನ್ ಮುಂದುವರಿಸಬೇಕೆಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ವರದಿಯಾಗಿದೆ. ಹಾಗಾಗಿ ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಗೊಳಿಸುವುದು ಮತ್ತು ಇನ್ನೂ ಅಪಾಯದ ಅಂಚಿನಲ್ಲೇ ಇರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುರಿಸುವುದು ಎನ್ನುವುದು ಬಹುತೇಕ ನಿಶ್ಚಯವಾದಂತಾಗಿದೆ. ಈ ಬಗ್ಗೆ ಜೂನ್ 12 ರಂದು ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.