ಮಂಡ್ಯ: ಜಿಲ್ಲೆಯ ಮುರುಕನಹಳ್ಳಿ ಸಮೀಪದ ಮೈಸೂರು-ಚನ್ನರಾಯಪಟ್ಟಣ ಹೆದ್ದಾರಿಯಲ್ಲಿ ಬೃಹತ್ ಬಾಯ್ಲರ್ ಟ್ಯಾಂಕ್ ಉರುಳಿಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ರಾಜಸ್ಥಾನದಿಂದ ನಂಜನಗೂಡು ಕೈಗಾರಿಕಾ ಪ್ರದೇಶಕ್ಕೆ ಸಾಗಿಸಲಾಗುತ್ತಿದ್ದ ಬಾಯ್ಲರ್ ಟ್ಯಾಂಕ್ ಹೊತ್ತ ಲಾರಿ, ಮುರುಕನಹಳ್ಳಿ ಬಳಿ ಮರಕ್ಕೆ ತಗುಲಿ ನಿಯಂತ್ರಣ ತಪ್ಪಿದೆ. ಪರಿಣಾಮ ಬೃಹತ್ ಟ್ಯಾಂಕ್ ರಸ್ತೆಯ ಮಧ್ಯದಲ್ಲೇ ಉರುಳಿಬಿದ್ದಿದೆ.
ಘಟನೆಯಿಂದ ಹೆದ್ದಾರಿ ಬಂದ್ ಆಗಿದ್ದು, ಎರಡೂ ಬದಿಗಳಲ್ಲಿ ವಾಹನಗಳ ಉದ್ದನೆಯ ಸಾಲು ಕಂಡುಬಂದಿದೆ. ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಚಾರ ನಿಯಂತ್ರಣಕ್ಕೆ ಮುಂದಾಗಿದ್ದು, ಬೃಹತ್ ಟ್ಯಾಂಕ್ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ. ಟ್ಯಾಂಕ್ ತೆರವಿಗೆ ವಿಶೇಷ ಉಪಕರಣಗಳ ಅಗತ್ಯವಿರುವುದರಿಂದ ಕಾರ್ಯಾಚರಣೆ ಪೂರ್ಣಗೊಳ್ಳಲು ಸಮಯ ಬೇಕಾಗುವ ಸಾಧ್ಯತೆ ಇದೆ.
ಟ್ಯಾಂಕ್ ತೆರವುಗೊಳ್ಳುವವರೆಗೆ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮಂಡ್ಯ ಪೊಲೀಸರು ಸೂಚನೆ ನೀಡಿದ್ದಾರೆ. ರಸ್ತೆ ಸುಗಮ ಸಂಚಾರಕ್ಕೆ ಪೊಲೀಸರು ಹಾಗೂ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.



