ವಿಜಯಸಾಕ್ಷಿ ಸುದ್ದಿ, ಗದಗ
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಹುಟ್ಟಿಕೊಂಡಿರುವ ರಾಜಕೀಯ ವೈಷಮ್ಯದಿಂದಾಗಿ ಎರಡು ಸಮುದಾಯಗಳ ನಡುವೆ ಕಲ್ಲು ತೂರಾಟ ನಡೆದು, ತಡೆಯಲು ಬಂದ ಗ್ರಾಮೀಣ ಠಾಣೆ ಪೊಲೀಸರ ಮೇಲೆಯೂ ಹಲ್ಲೆ ನಡೆಸಿದ ಘಟನೆ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.
ಬಧವಾರ ಸಂಜೆಯಿಂದಲೇ ಸಣ್ಣದಾಗಿ ಹೊತ್ತಿಕೊಂಡಿದ್ದ ಕಲಹ ಗುರುವಾರ ಮುಂಜಾನೆ ಭುಗಿಲೆದ್ದಿದೆ. ಮುಂಜಾನೆ ಗೋವಿಂದಪ್ಪ ಎನ್ನುವ ವ್ಯಕ್ತಿ ಬಹಿರ್ದೆಸೆಗೆ ಹೋದಾಗ ಒಂದು ಸಮುದಾಯದ ಜನ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅದನ್ನು ಕೇಳಲು ಬಂದ ಮಗನ ಮೇಲೂ ಹಲ್ಲೆ ಮಾಡಿದ್ದಾರೆ. ಹೀಗಾಗಿ ಇನ್ನೊಂದು ಸಮುದಾಯದ ಜನ ಒಗ್ಗಟ್ಟಾಗಿ ಕೇರಿಯೊಳಗೆ ಹೋಗಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಸ್ಥಳದಲ್ಲಿಯೇ ಇದ್ದ ಪೊಲೀಸರು ತಡೆದಿದ್ದಾರೆ. ಆಗ ಎರಡು ಕಡೆಯಿಂದ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಪೇದೆಯೂ ಸೇರಿ ಎರಡೂ ಕಡೆಯ ಸುಮಾರು ೧೫ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದೊಡನೆ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಸಿಪಿಐ ರವಿಕುಮಾರ್ ಕಪ್ಪತನವರ್, ಸುಬ್ಬಾಪುರಮಠ ಭೇಟಿ ನೀಡಿ ಪರಿಸ್ಥಿತಿ ತಹಬದಿಗೆ ತಂದರು. ಸತೀಶ ದೊಡ್ಡಮನಿ ಹಾಗೂ ಈರಪ್ಪ ಬೇಲೇರಿ ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಮತ ಎಣಿಕೆಯ ಸಂದರ್ಭದಲ್ಲಿ ಎರಡು ಮತಗಳ ಅಂತರದಿಂದ ಈರಪ್ಪ ಬೇಲೇರಿ ಗೆದ್ದಿದ್ದರು. ಇದರಿಂದ ಅಸಮಾಧಾನಗೊಂಡ ಪರಾಜಿತ ಅಭ್ಯರ್ಥಿ ಸತೀಶ ಹಗೆ ಸಾಧಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗ್ರಾಮದಲ್ಲೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಬಿಗುವಿನಿಂದ ಕೂಡಿದೆ. ಸ್ಥಳದಲ್ಲಿ ಮುನ್ನೆಚ್ಚರಿಕೆ ಅಂಗವಾಗಿ, ನಾಲ್ವರು ಪಿಎಸ್ಐ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೂರು ತುಕಡಿಗಳು ಬೀಡು ಬಿಟ್ಟಿದ್ದು, ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಯ 17 ಜನರನ್ನು ಬಂಧಿಸಲಾಗಿದೆ. ದೂರು ಹಾಗೂ ಪ್ರತಿ ದೂರು ದಾಖಲಿಸಿಕೊಂಡಿರುವ ಗದಗ ಗ್ರಾಮೀಣ ಠಾಣೆ ಪೊಲೀಸರು, ಇನ್ನಷ್ಟು ಜನರ ಬಂಧನಕ್ಕೆ ಜಾಲ ಬೀಸಿದ್ದಾರೆ.