ವಿಜಯಸಾಕ್ಷಿ ಸುದ್ದಿ, ಗದಗ
ಇಲ್ಲಿನ ಶಿದ್ದರಾಮೇಶ್ವರ ನಗರದ ನಿವಾಸಿ ಮಂಜುನಾಥ್ ಈರನಗೌಡ ಬಾಣದ ಎಂಬಾತನಿಗೆ ಶ್ರೀಧರ ವಜ್ರಬಂಡಿ ಜೀವ ಬೆದರಿಕೆ ಹಾಕಿದ್ದಾನೆ.
ಎಪಿಎಂಸಿ ಯಾರ್ಡ್ನಿಂದ ವಾಪಸ್ ಮನೆಗೆ ಬರುವಾಗ ಬೈಕ್ ಅಡ್ಡಗಟ್ಟಿದ ಶ್ರೀಧರ ವಜ್ರಬಂಡಿ, ಮಂಜುನಾಥ್ ಬಾಣದ ಮೇಲೆ ಏಕಾಏಕಿ, ‘ನನ್ನ ಅಕ್ಕಿ ವ್ಯವಹಾರದ ಬಗ್ಗೆ ಯಾರಿಗೆ ಮಾಹಿತಿ ಹೇಳಿ ಹಿಡಸ್ತೀಯೆನ, ಕೇಸ್ ಮಾಡಸ್ತೀಯೇನ ಮಗನಾ….’ ಅನ್ನುತ್ತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಿದ್ದಾಗ, ‘ನಾ ಯಾಕ ಯಾಕೋ ಅಣ್ಣ ಹಿಂಗ್ ಮಾತಾಡಕತ್ತಿಯಲ್ಲ, ಯಾವ ನಿಮ್ಮ ವ್ಯವಹಾರದ ಬಗ್ಗೆ ಯಾರ ಮಾತಾಡ್ಯಾರ? ಯಾಕ ನಿಮ್ಮ ವಿಷಯಕ್ಕ ಬರ್ಲಿ ಪಾ? ನಿಮ್ಮ ಅಕ್ಕಿ ವ್ಯವಹಾರಕ ನನಗ ಏನೂ ಸಂಬಂಧ ಇಲ್ಲ. ಯಾರ ನನ್ನ ಬಗ್ಗೆ ನಿನ್ನ ಮುಂದ ಸುಳ್ಳು ಹೇಳ್ಯಾರ. ನಾನ ಯಾಕ ಅಂತ ಕೆಲಸ ಮಾಡ್ಲಿ ಪಾ? ನಾನು ಅಂತಾದು ಏನೂ ಮಾಡಿಲ್ಲ’ ಅಂತ ಮಂಜು ಹೇಳಿದ.
ಶ್ರೀಧರ ವಜ್ರಬಂಡಿ ಮತ್ತೆ ಏರು ಧ್ವನಿಯಲ್ಲಿ, ‘ನನ್ನ ತಂಟೆಗೆ ಬಂದ್ರೆ ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮಕಿ ಹಾಕಿದ. ತಪ್ಪಿಸಿಕೊಳ್ಳಲು ಸಮೀಪವೇ ಇದ್ದ ಎಸ್ಪಿ ಕಚೇರಿ ಒಳಗೆ ಹೋದಾಗ, ‘ಇವತ್ತು ಉಳಕೊಂಡ ಮಗನಾ. ನಿನ್ನ ಜೀವ ಸಮೇತ ಬಿಡುವುದಿಲ್ಲ’ ಅಂತ ಧಮ್ಕಿ ಹಾಕಿರುವ ಶ್ರೀಧರ ವಜ್ರಬಂಡಿ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮಂಜು ಬಾಣದ ದೂರು ನೀಡಿದ್ದಾರೆ. ಬೆಟಗೇರಿ ಬಡಾವಣೆ ಠಾಣೆಯಲ್ಲಿ ಐಪಿಸಿ 1860 (u/s-506,341, 504) ಕಲಂನಡಿ ಪ್ರಕರಣ ದಾಖಲಾಗಿದೆ.