ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ: ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಮುಗಿಬಿದ್ದು ಗದ್ದಲ, ಗಲಾಟೆ ಮಾಡಿದ್ದು, ಹಬ್ಬವನ್ನು ಲೆಕ್ಕಿಸದೆ ಸೋಮವಾರ ಯೂರಿಯಾ ಗೊಬ್ಬರ ಪಡೆಯಲು ರೈತರು ಪಟ್ಟಣದ ತೆಗ್ಗಿನ ಮಠದ ಮುಂಭಾಗದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಅಗತ್ಯ ಯೂರಿಯಾ ರಸಗೊಬ್ಬರ ಸಿಗದ ಪರಿಣಾಮ ಬೆಳಿಗ್ಗೆಯಿಂದಲೇ ರೈತರು ಪಟ್ಟಣದ ತೆಗ್ಗಿನ ಮಠ ಪಕ್ಕದ ವೀರಭದ್ರೇಶ್ವರ ಆಗ್ರೋ ಕೇಂದ್ರದ ಮುಂದೆ ಜಮಾಯಿಸಿದ್ದರು. ಸೋಮವಾರ ಬೆಳಿಗ್ಗೆ ಗೊಬ್ಬರ ನೀಡುತ್ತೇವೆಂದು ಹೇಳಿದ್ದಕ್ಕೆ ಬೆಳಿಗ್ಗೆ 6 ಗಂಟೆಯಿಂದ ಅಂಗಡಿ ಮುಂಭಾಗದಲ್ಲಿ ಕಾದು ಕುಳಿತಿದ್ದೇವೆ. ಆದರೆ ಅಂಗಡಿ ಮಾಲೀಕರು ಅಂಗಡಿ ತೆರೆದು ಗೊಬ್ಬರ ನೀಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆಗೆ ಪೊಲೀಸ್ ಬ್ಯಾರಿಕೇಡರ್ಗಳನ್ನು ಅಡ್ಡಗಟ್ಟಿ ಕೆಲ ಸಮಯ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸಿದರು.
ಕೂಡಲೆ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರೈತರ ಆಕ್ರೋಶವನ್ನು ತಿಳಿಗೊಳಿಸಲು ಪ್ರಯತ್ನಿಸಿದರು. ನಂತರ ಸ್ಥಳಕ್ಕೆ ಕೃಷಿ ಸಹಾಯಕ ನಿರ್ದೇಶಕ ವಿ.ಸಿ. ಉಮೇಶ್ ಆಗಮಿಸಿ ಈಗಾಗಲೇ ವೀರಭದ್ರೇಶ್ವರ ಆಗ್ರೋ ಕೇಂದ್ರಕ್ಕೆ 45 ಮೆಟ್ರಿಕ್ ಟನ್ ಗೊಬ್ಬರ ಬಂದಿದ್ದು, ರೈತರು ಸಹಕರಿಸಿ ಬಂದಿರುವ ಗೊಬ್ಬರವನ್ನು ಸಾಲುಗಟ್ಟಿ ಪಡೆಯಲು ಮನವಿ ಮಾಡಿಕೊಂಡರು.



