ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ರಾಜ್ಯ ಬಿಜೆಪಿಯಲ್ಲಿ ಬಂಡಾಯದ ಬಿಸಿ ಭುಗಿಲೆದ್ದಿದೆ. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕ ಆಗಮಿಸಿದ್ದಾರೆ. ಹೀಗಾಗಿ ನಿನ್ನೆಗಿಂತಲೂ ಸದ್ಯ ಬಂಡಾಯದ ಬಿಸಿ ಹೆಚ್ಚಾಗಿದೆ. ಅನೇಕ ಶಾಸಕರು ಅರುಣ್ ಸಿಂಗ್ ಅವರನ್ನು ಇಂದು ಭೇಟಿ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಈಗಾಗಲೇ ಸಿಎಂ ಬದಲಾವಣೆ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸದ್ಯ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಗೆ ಸಭೆಯನ್ನು ವರ್ಗಾಯಿಸಿದ್ದಾರೆ. ಸಭೆ ಇಂದು ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಭೆ ನಡೆಯುವುದಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅರುಣ್ ಸಿಂಗ್ ಸಭೆಯನ್ನು ಬಿಜೆಪಿ ಕಚೇರಿಗೆ ಸ್ಥಳಾಂತರಿಸಿದ್ದಾರೆ.
ಶಾಸಕರು ನನ್ನನ್ನು ಭೇಟಿ ಮಾಡುವುದಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷರ ಮುಂದೆಯೇ ಭೇಟಿ ಮಾಡಬೇಕು ಎಂದು ಅರುಣ್ ಸಿಂಗ್ ಹೇಳಿದ್ದಾರೆ. ಇಂದು ಬಿಜೆಪಿಯ ಸಂಸದರು, ಶಾಸಕರು, ಪರಿಷತ್ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ.
ಶಾಸಕ ರೇಣುಕಾಚಾರ್ಯ ಈಗಾಗಲೇ ಬೆಂಗಳೂರಿಗೆ ಬಂದಿದ್ದಾರೆ. ಅಲ್ಲದೇ, ಅರುಣ್ ಸಿಂಗ್ ಅವರ ಭೇಟಿಗಾಗಿ ಕಾಯುತ್ತಿದ್ದಾರೆ. ಇನ್ನು ಪಕ್ಷದ ವಿರುದ್ಧ ಈಗಾಗಲೇ ಅಸಮಾಧಾನಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ವಿರುದ್ಧ ಅರುಣ್ ಸಿಂಗ್ ಗೆ ದೂರು ನೀಡಲೂ ಕೆಲವು ಶಾಸಕರು ಸಿದ್ಧರಾಗಿದ್ದಾರೆ. ಅಲ್ಲದೇ, ಸಿಎಂ ವಿರುದ್ಧ ಹೇಳಲು ಹಲವು ಶಾಸಕರು ಸಿದ್ಧರಾಗಿದ್ದಾರೆ. ಬಿಜೆಪಿಯಲ್ಲಿನ ಬಂಡಾಯ ಜನರ ಮುಂದೆ ತೆರೆದುಕೊಳ್ಳುತ್ತಿದೆ. ಹೀಗಾಗಿ ರಾಜ್ಯದ ಜನತೆ ಬಿಜೆಪಿಯಲ್ಲಿನ ಬಂಡಾಯವನ್ನು ನೋಡುತ್ತಿದ್ದಾರೆ.