HomeKarnataka Newsರಾಹುಲ್ ಗಾಂಧಿ ಸೂಚನೆಯಂತೆ ಪ್ರತಿ ಕ್ಷೇತ್ರದಲ್ಲೂ ಕಾನೂನು ಬ್ಯಾಂಕ್ ರಚನೆಗೆ ಸೂಚನೆ: ಡಿ.ಕೆ. ಶಿವಕುಮಾರ್

ರಾಹುಲ್ ಗಾಂಧಿ ಸೂಚನೆಯಂತೆ ಪ್ರತಿ ಕ್ಷೇತ್ರದಲ್ಲೂ ಕಾನೂನು ಬ್ಯಾಂಕ್ ರಚನೆಗೆ ಸೂಚನೆ: ಡಿ.ಕೆ. ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: “ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಒಳ ಮೀಸಲಾತಿ ವಿಚಾರದಲ್ಲಿ ಎಲ್ಲಾ ಸಮುದಾಯದವರಿಗೂ ಸಮಾನತೆ ನೀಡಿ, ತೃಪ್ತಿಯಾಗುವಂತೆ ನಮ್ಮ ಸರ್ಕಾರ ತೀರ್ಮಾನ ಮಾಡಿದೆ. ಇದು ದೇವರಾಜ ಅರಸು ಅವರಿಗೆ ನಮ್ಮ ಸರ್ಕಾರ ಸಲ್ಲಿಸುತ್ತಿರುವ ನಮನ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಇಬ್ಬರೂ ನಾಯಕರ ಭಾವಚಿತ್ರಕ್ಕೆ ಬುಧವಾರ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

“ನ್ಯಾಯಮೂರ್ತಿ ಸದಾಶಿವ ಆಯೋಗ ರಚನೆಯಾಗಿ 25 ವರ್ಷವಾಗಿದೆ. ನಮ್ಮ ಸರ್ಕಾರ ಸುದೀರ್ಘ ಚರ್ಚೆ ಮಾಡಿ ಪರಿಶಿಷ್ಟ ಸಮುದಾಯದವರ ಒಳಮಿಸಲಾತಿ ವಿಚಾರಕ್ಕೆ ಒಂದು ಸ್ವರೂಪ ನೀಡಿದೆ. ಪರಿಶಿಷ್ಟ ಜಾತಿಯ ಎಡಗೈ ಹಾಗೂ ಬಲಗೈನವರು ಸಮಾಧಾನವಾಗಿ ಇದನ್ನು ಒಪ್ಪಿಕೊಂಡಿದ್ದಾರೆ. ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡಿದ್ದೇವೆ. ಸಚಿವ ಸಂಪುಟ ಸಭೆಯಲ್ಲಿ ನಿನ್ನೆ ಕೈಗೊಂಡ ತೀರ್ಮಾನ ಐತಿಹಾಸಿಕವಾದದ್ದು. ಈ ಬಗ್ಗೆ ಮುಖ್ಯಮಂತ್ರಿಗಳು ಸದನದಲ್ಲಿ ಘೋಷಣೆ ಮಾಡಲಿದ್ದಾರೆ.

ನಾನು 1989 ರಿಂದಲೂ ವಿಧಾನಸಭೆಯಲ್ಲಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಸರ್ಕಾರ ಈ ರೀತಿ ಎಲ್ಲರಿಗೂ ಸಮಾಧಾನವಾಗುವಂತಹ ತೀರ್ಮಾನ ಮಾಡಿದ್ದರೆ ಅದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ” ಎಂದು ಹೇಳಿದರು.

“ಲಂಬಾಣಿ, ಬೋವಿ ಸಮುದಾಯದ ಜೊತೆಗೆ ಎಡ ಹಾಗೂ ಬಲಗೈ ನಾಯಕರನ್ನು ಕರೆಸಿ ನಿನ್ನೆ ಮಾತನಾಡಿದೆ. ಎಲ್ಲರಿಗೂ ಸಮಾಧಾನ ತರುವ ತೀರ್ಮಾನ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ದೇವರಾಜ ಅರಸು ಅವರ ಕಾಲದಿಂದ ಇಲ್ಲಿಯವರೆಗೂ ಸಾಮಾಜಿಕ ನ್ಯಾಯದ ಚಿಂತನೆ ಮಾಡುತ್ತಿದೆ ಎಂದರು.

ದೇಶಕ್ಕೆ ಇಂದಿರಾ ರೀತಿ ರಾಜ್ಯಕ್ಕೆ ದೇವರಾಜ ಅರಸು

“ಇನ್ನು ನಮ್ಮ ರಾಜ್ಯ ಕಂಡ ಮತ್ತೊಬ್ಬ ಧೀಮಂತ ನಾಯಕರು ದೇವರಾಜ ಅರಸು ಅವರು. ಅವರೂ ಕೂಡ ರಮೇಶ್ ಕುಮಾರ್, ಟಿ.ಬಿ ಜಯಚಂದ್ರ, ಹೆಚ್.ವಿಶ್ವನಾಥ್ ರಂತಹ ನಾಯಕರಿಗೆ ಚಿಕ್ಕ ವಯಸ್ಸಿಗೆ ಟಿಕೆಟ್ ನೀಡಿ ನಾಯಕರನ್ನಾಗಿ ಬೆಳೆಸಿದರು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಚಿವರನ್ನಾಗಿ ಮಾಡಿದ್ದು ಅರಸು ಅವರು. ಇವರಿಗೆ ನಾಯಕರನ್ನು ಬೆಳೆಸುವ ಗುಣವಿತ್ತು” ಎಂದು ಸ್ಮರಿಸಿದರು.

“ನಾವು ಇಂದಿಗೂ ಭೂಸುಧಾರಣಾ ಕಾಯ್ದೆ ಬಗ್ಗೆ ಚರ್ಚೆ ಮಾಡುತ್ತೇವೆ. ಕೆಲವರಿಗೆ ಉಪಕಾರಸ್ಮರಣೆ ಎಂಬುದಿಲ್ಲ. ನಮಗೆ ಯಾರಿಂದ ಭೂಮಿ ಸಿಕ್ಕಿದೆ ಎಂದು ನೆನಪಿರುವುದಿಲ್ಲ. ದೇವರಾಜ ಅರಸು ಹಾಗೂ ಇಂದಿರಾ ಗಾಂಧಿ ಅವರ ಚಿಂತನೆಯಿಂದ ಬಡವರಿಗೆ ಭೂಮಿ ನೀಡಿದ ಪರಿಣಾಮ ಲಕ್ಷಾಂತರ ಜನ ಬದುಕು ಕಂಡುಕೊಂಡರು. ದೇಶಕ್ಕೆ ಇಂದಿರಾಗಾಂಧಿ ಅವರು ಹೇಗೆ ಬಲಿಷ್ಠ ನಾಯಕಿಯಾಗಿದ್ದರೋ,

ಅದೇ ರೀತಿ ನಮ್ಮ ರಾಜ್ಯಕ್ಕೆ ದೇವರಾಜ ಅರಸು ಅವರು ಬಲಿಷ್ಠ ನಾಯಕರು. ಇಂದು ದೇವರಾಜ ಅರಸು ಅವರು ನಮ್ಮೊಂದಿಗೆ ಇಲ್ಲವಾದರೂ ಅವರ ಕೆಲಸಗಳು ಇನ್ನೂ ಜೀವಂತವಾಗಿವೆ. ವೃದ್ಧಾಪ್ಯ ವೇತನ ಕೊಟ್ಟಿದ್ದು ಇಂದಿರಾ ಗಾಂಧಿ ಅವರು. ಇಂತಹ ಒಂದು ಕಾರ್ಯಕ್ರಮವನ್ನು ಬಿಜೆಪಿಯವರಾಗಲಿ, ದಳದವರಾಗಲಿ ನೀಡಿಲ್ಲ. ಇದೇ ಕಾಂಗ್ರೆಸ್ ಪಕ್ಷದ ಶಕ್ತಿ” ಎಂದು ಬಣ್ಣಿಸಿದರು.

ಪ್ರತಿ ಕ್ಷೇತ್ರದಲ್ಲೂ ಲೀಗಲ್ ಬ್ಯಾಂಕ್ ರಚನೆಗೆ ಸೂಚನೆ

“ಇತ್ತೀಚೆಗೆ ಎಐಸಿಸಿ ಮಾನವ ಹಕ್ಕುಗಳು ಹಾಗೂ ಕಾನೂನು ಘಟಕದ ವತಿಯಿಂದ ದೆಹಲಿಯಲ್ಲಿ ನಡೆದ ವಿಚಾರಗೋಷ್ಠಿಗೆ ನಾನೂ ಹೋಗಿದ್ದೆ. ರಾಹುಲ್ ಗಾಂಧಿ ಅವರ ಭಾಷಣ ನೀವು ನೋಡಬೇಕು. ಮತಗಳ್ಳತನ ವಿಚಾರವಾಗಿ ಮಾತನಾಡುತ್ತಾ ಆಸ್ಪತ್ರೆಗಳಲ್ಲಿ ಬ್ಲಡ್ ಬ್ಯಾಂಕ್ ಹೇಗಿರುತ್ತದೆಯೋ ಅದೇ ರೀತಿ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಪಕ್ಷದಿಂದ ಕಾನೂನು ಬ್ಯಾಂಕ್ ಇರಬೇಕು. ಪ್ರತಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರವಾಗಿರುವವರು ಇರುತ್ತಾರೆ. ಅವರನ್ನು ಒಳಗೊಂಡು ಇದನ್ನು ರೂಪಿಸಬೇಕು ಎಂದು ಹೇಳಿದರು. ರಾಹುಲ್ ಗಾಂಧಿ ಅವರ ಮಾರ್ಗದರ್ಶನದಂತೆ ಮುಂದಿನ ಆರು ತಿಂಗಳಲ್ಲಿ ನಮ್ಮ ರಾಜ್ಯದ 224 ಕ್ಷೇತ್ರಗಳಲ್ಲಿ ಈ ಲೀಗಲ್ ಬ್ಯಾಂಕ್ ರಚಿಸಬೇಕು ಎಂದು ನಮ್ಮ ಕಾನೂನು ಘಟಕದ ಅಧ್ಯಕ್ಷರಿಗೂ ನಿರ್ದೇಶನ ನೀಡಿದ್ದೇನೆ” ಎಂದು ತಿಳಿಸಿದರು.

ಬೂತ್ ಮಟ್ಟದಲ್ಲಿ ಲೀಡ್ ಕೊಡುವವರು ಮಾತ್ರ ನಾಯಕರು

“ಕಾಂಗ್ರೆಸ್ ಮುಖಂಡರು ಒನ್ ಮ್ಯಾನ್ ಶೋ ರೀತಿ ಇದ್ದರೆ ನಾನು ನಿಮ್ಮನ್ನು ನಾಯಕರು ಎಂದು ಒಪ್ಪುವುದಿಲ್ಲ. ನೀವೆಲ್ಲರೂ ಬೂತ್ ಮಟ್ಟದಲ್ಲಿ ನಾಯಕರಾಗಿರಬೇಕು. ನಮ್ಮದು ಬಿಜೆಪಿ ಪ್ರಾಬಲ್ಯ ಪ್ರದೇಶ ಹೇಗೆ ಸಾಧ್ಯ ಎಂದು ಕೇಳಬಹುದು. ನೀವು ನಿಮ್ಮ ಬೂತ್ ಮಟ್ಟದಲ್ಲೇ ಸಂಘಟನೆ ಮಾಡದಿದ್ದರೆ ನಾಯಕರು ಎಂದು ಹೇಗೆ ಒಪ್ಪುವುದು? ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬಂದು ಮತಗಳ್ಳತನ ಬಗ್ಗೆ ಹೋರಾಟ ಮಾಡಿದರು.

ಇದೇ ಶುಕ್ರವಾರ ರಾಜ್ಯ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ ಅವರು ಆಗಮಿಸುತ್ತಿದ್ದು, ಬೆಂಗಳೂರಿನ ಪರಾಜಿತ ಅಭ್ಯರ್ಥಿಗಳು, ಜಿಲ್ಲಾಧ್ಯಕ್ಷರು, ಶಾಸಕರನ್ನು ಕರೆದು ನಾನು ಹಾಗೂ ಮುಖ್ಯಮಂತ್ರಿ ಸೇರಿ ಸಭೆ ಮಾಡಲಿದ್ದೇವೆ. ಬ್ಲಾಕ್ ಅಧ್ಯಕ್ಷರನ್ನು ಕರೆಯುವ ಬಗ್ಗೆ ತೀರ್ಮಾನ ಮಾಡುತ್ತೇವೆ” ಎಂದು ತಿಳಿಸಿದರು.

“ಹಿಂದುಳಿದ ವರ್ಗಗಳ ಗಣತಿ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ. ನಮ್ಮ ಸಮುದಾಯದಲ್ಲಿ ಅಷ್ಟು ಲಕ್ಷ ಇದ್ದೇವೆ, ಇಷ್ಟು ಲಕ್ಷ ಇದ್ದೇವೆ, ಆದರೆ ನಮ್ಮವರ ಹೆಸರು ಬಿಡಲಾಗಿದೆ ಎಂದು ಆಮೇಲೆ ಆರೋಪ ಮಾಡುವುದು ಬೇಡ. ಪಕ್ಷದ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು ಹಾಗೂ ನಾಯಕರು ಜನರ ಬಳಿಗೆ ಹೋಗಿ, ಆಯಾ ಸಮಮುದಾಯದವರು ಎಷ್ಟು ಜನ ಇದ್ದಾರೆ ಎಂದು ಸರಿಯಾಗಿ ಪಟ್ಟಿಗೆ ಹೆಸರು ಸೇರಿಸುವಂತೆ ಕೆಲಸ ಮಾಡಬೇಕು. ಇದನ್ನು ಸರಿಯಾದ ರೀತಿಯಲ್ಲಿ ಮಾಡಿದ ನಂತರ ನೀವು ನಿಮ್ಮ ಪಾಲಿನ ಹಕ್ಕನ್ನು ಕೇಳಿ. ನಿಮ್ಮ ಪಾಲಿನ ಹಕ್ಕು ಕೇಳುವುದರಲ್ಲಿ ಯಾವುದೇ ತಪ್ಪಿಲ್ಲ” ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!