ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳನ್ನು ಟಿವಿ, ಮೊಬೈಲ್ಗಳಿಂದ ದೂರವಿರಿಸಲು ಪುರಾಣ-ಪ್ರವಚನ, ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಹಾಗೂ ರಾಮಾಯಣ, ಮಹಾಭಾರತ, ಭಗವದ್ಗೀತೆಗಳನ್ನು ಓದುವಂತಹ ವಾತಾವರಣವನ್ನು ಪಾಲಕರು ಸೃಷ್ಟಿಸಬೇಕು ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರಾವಣ ಮಾಸದುದ್ದಕ್ಕೂ ಶ್ರೀ ಸಿದ್ದೇಶ್ವರ ಸತ್ಸಂಗ ಬಳಗ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕನ ಬಳಗ, ಪ್ರೇಮಕ್ಕ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ `ಶ್ರಾವಣ ಸಂಜೆ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗದಗ ಸರಕಾರಿ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ. ಎಸ್.ವಿ. ಸಜ್ಜನಶೆಟ್ಟರ `ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು’ ವಿಷಯದ ಕುರಿತು ಉಪನ್ಯಾಸ ನೀಡಿ, ನೂರಾರು ವರ್ಷಗಳ ಇತಿಹಾಸವನ್ನು ನೋಡಿದಾಗ ವಚನಗಳು ನಮಗೆ ನೀಡಿದ ಮಹತ್ವದ ಅರಿವಾಗುತ್ತದೆ. ಸಮಾಜದ ಸ್ಥಿತಿಗತಿಗಳನ್ನು ತಮ್ಮ ವಚನಗಳ ಮೂಲಕ ನಾಡಿಗೆ ನೀಡಿ ಅದರಿಂದ ಸಮಾಜ ಸುಧಾರಣೆಯ ಚಿಂತನೆಯನ್ನು ಶರಣರು ಹೊಂದಿದ್ದು, ಬಸವಣ್ಣನವರು, ಅಕ್ಕಮಹಾದೇವಿ, ಮುಕ್ತಾಯಕ್ಕ ಸೇರಿದಂತೆ ಅನೇಕ ಶರಣರ ವಚನಗಳು ನಮ್ಮ ಸಮಾಜದ ಅಂಕು-ಡೊಂಕುಗಳ ಬಗ್ಗೆ ತಿಳಿಸುವ ಅಂಶಗಳಾಗಿವೆ. ಇವು ಯಾವುದೇ ಬರವಣಿಗೆಯಿಂದ ಬಂದದ್ದಲ್ಲ, ಶರಣರ ಬಾಯಿಯಿಂದ ಬಾಯಿಗೆ ಸಾಗಿ ಬಂದು ನಂತರ ಅಕ್ಷರ ರೂಪದಲ್ಲಿ ಪ್ರಕಟವಾಗಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್. ನಾಗಲೋಟಿ ಮಾತನಾಡಿದರು. ಅತಿಥಿಗಳಾಗಿ ನಾಗಭೂಷಣ ಪವಾಡಶೆಟ್ರ, ಪರಮೇಶ್ವರಪ್ಪ ಬಂಕಾಪೂರ, ಎಂ.ಪಿ. ಹುಬ್ಬಳ್ಳಿ, ಕಿರಣ ನಾಲ್ವಾಡ, ಜಿ.ಎಸ್. ರಾಮಶೆಟ್ಟರ, ಎಲ್.ಎಸ್. ಅರಳಹಳ್ಳಿ, ಶೋಭಾ ಗಾಂಜಿ, ಮಧುಮತಿ ಹತ್ತಿಕಾಳ, ಸಂಘಟನೆಯ ಅಧ್ಯಕ್ಷರಾದ ನಿರ್ಮಲಾ ಅರಳಿ, ರತ್ನಾ ಕರ್ಕಿ, ಲಲಿತಕ್ಕ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ, ಗಂಗಾಧರ ಅರಳಿ, ನಿಂಗಪ್ಪ ಗೊರವರ, ಮಲ್ಲು ಕಳಸಾಪುರ ಮುಂತಾದವರಿದ್ದರು.
ತಾಂತ್ರಿಕತೆಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೊಂದಿಗೆ ಹಿರಿಯರು ನಡೆದು ಬಂದ ದಾರಿಯಲ್ಲಿ ಸಾಗಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಶ್ರಾವಣ ಮಾಸದುದ್ದಕ್ಕೂ ಧಾರ್ಮಿಕ, ಸಾಹಿತ್ತಿಕ ಕಾರ್ಯಕ್ರಮ ಮಾಡುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಅಕ್ಕನ ಬಳಗದ ಕಾರ್ಯ ಶ್ಲಾಘನೀಯ ಎಂದು ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.