ಧಾರವಾಡ:- ಧಾರವಾಡದ ನರೇಂದ್ರ ಗ್ರಾಮದಲ್ಲಿ ಗಣೇಶ ಮೆರವಣಿಗೆ ವೇಳೆ ಜನರ ಹುಚ್ಚಾಟವನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಪರಿಣಾಮ ಪೊಲೀಸರು ಲಘು ಲಾಠಿಚಾರ್ಜ್ ಮಾಡಿರುವ ಘಟನೆ ಜರುಗಿದೆ.
ಗ್ರಾಮದ ಎರಡು ಓಣಿಯವರು ಶನಿವಾರ ಸಂಜೆ ಏಕಕಾಲಕ್ಕೆ ಗಣೇಶ ವಿಸರ್ಜನೆಯನ್ನು ಆರಂಭ ಮಾಡಿದ್ದರು. ಈ ಮೆರವಣಿಗೆ ವೇಳೆ ಎರಡೂ ಓಣಿಯವರು ಎದುರು ಬದುರು ಡಿಜೆ ಹಾಕಿ ಹುಚ್ಚೆದ್ದು ಕುಣಿಯಲು ಆರಂಭಿಸಿದ್ದರು. ಆಗ ಪೊಲೀಸರು ಎರಡು ಡಿಜೆಯನ್ನು ಬೇರೆ ಬೇರೆ ಕಡೆ ತಿರುಗಿಸಲು ಯತ್ನಿಸಿದ್ದರು.
ಆದರೆ ಅಲ್ಲಿದ್ದ ಜನರು ಎರಡು ಡಿಜೆಯನ್ನು ಬೇರೆ ಕಡೆ ತಿರುಗಿಸದಂತೆ ಒತ್ತಾಯಿಸಿದ್ದರು. ಜನರ ನಿಯಂತ್ರಣ ಮಾಡಲು ಪ್ರಯತ್ನಿಸಿದಾಗ ಪೊಲೀಸರಿಗೆ ಅವಾಜ್ ಹಾಕಿ, ಜನರು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು. ಇದರಿಂದ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಬಳಿಕ ಪೊಲೀಸರು ಡಿಜೆ ಬಂದ್ ಮಾಡಿಸಿ, ಶಾಂತಿಯುತವಾಗಿ ಗಣೇಶನ ವಿಸರ್ಜನೆ ಮಾಡಿಸಿದರು.
ಒಟ್ಟಾರೆ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಒಂದಲ್ಲ ಒಂದು ಈ ರೀತಿ ಘಟನೆಗಳು ನಡೆಯುವ ಕಾರಣದಿಂದಲೇ ಪೊಲೀಸರು ಹೆಚ್ಚಿನ ನಿಗಾ ವಹಿಸುತ್ತಾರೆ.