ವಿಜಯಸಾಕ್ಷಿ ಸುದ್ದಿ, ಗದಗ: ಸಮಾಜ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕದ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಗದಗ ನಗರದ ಡಾ. ಬಿ.ಆರ್. ಅಂಬೇಡ್ಕರ್ ಸಭಾ ಭವನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ವಿಷಯದ ಕುರಿತು ಗದಗ ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿತ್ತು.
ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್. ಅವರು ಚಿತ್ರಕಲಾ ಶಿಬಿರದಲ್ಲಿ ಚಿತ್ರ ರಚನೆ ವೀಕ್ಷಿಸಿ, ಶಿಕ್ಷಕರಿಗೆ ಶುಭಕೋರಿ ಮಾತನಾಡಿದ “ಜಿಲ್ಲೆಯ ಎಲ್ಲಾ ವಸತಿ ಶಾಲೆಗಳ ಚಿತ್ರಕಲಾ ಶಿಕ್ಷಕರಿಂದ ಉತ್ತಮ ಚಿತ್ರಕಲೆಗಳು ಮೂಡಿಬರಲಿ. ಈ ಚಿತ್ರಗಳು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಗೆ ಮೆರಗು ನೀಡುವಂತಾಗಲಿ ಎಂದು ಹೇಳಿದರು.
ನುರಿತ ಚಿತ್ರಕಲಾ ಶಿಕ್ಷಕರು ರಚಿಸಿರುವ ಚಿತ್ರಗಳು ವೀಕ್ಷಿಸುವ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಪ್ರಜಾಪ್ರಭುತ್ವದ ಕುರಿತು ಗೌರವ ಇಮ್ಮಡಿಗೊಳ್ಳಲು ಪ್ರೇರಣೆಯಾಗಲಿ. ಇದರಿಂದ ನಮ್ಮ ಪ್ರಜಾಪ್ರಭುತ್ವ ಇನ್ನಷ್ಟು ದೃಢವಾಗಲು ಸಹಕಾರ ದೊರೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಚಿತ್ರಕಲಾ ಶಿಕ್ಷಕರು ತಮ್ಮದೇ ಶೈಲಿಯಲ್ಲಿ ಚಿತ್ರಗಳನ್ನು ಮನೋಜ್ಞವಾಗಿ ರಚಿಸುವ ಮೂಲಕ ಗಮನ ಸೆಳೆದರು. “ನನ್ನ ಮತ – ನನ್ನ ಹಕ್ಕು”, “ಭಾರತ ಸಂವಿಧಾನ”, “ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ”, “ನನ್ನ ಮತ – ನನ್ನ ಭವಿಷ್ಯ” ಹಾಗೂ “ಅಂಬೇಡ್ಕರ್ ಸಂವಿಧಾನ” ಕುರಿತಂತೆ ತಮ್ಮ ಕಲೆಯ ಮೂಲಕ ಬೆಳಕು ಚೆಲ್ಲಿದರು.
ಈ ವೇಳೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹಣಬರಟ್ಟಿ ಸೇರಿದಂತೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಜಿಲ್ಲಾ ಚಿತ್ರಕಲಾ ಶಿಕ್ಷಕರು ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



