ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ದಸರಾ ಹಬ್ಬದ ನಿಮಿತ್ತ ಈ ಭಾಗದಲ್ಲಿಯೇ ನೂತನ ಪ್ರಯೋಗವಾಗಿರುವ ದುರ್ಗಾದೌಡ ಎನ್ನುವ ಧಾರ್ಮಿಕ ನಡಿಗೆ ವಿಶಿಷ್ಟ ಕಾರ್ಯಕ್ರಮವು 10 ದಿನಗಳ ಕಾಲ ನೆರವೇರಲಿದ್ದು, ಪ್ರಥಮ ದಿನವಾದ ಸೋಮವಾರ ಪಟ್ಟಣದ ಗ್ರಾಮದೇವತೆ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಗ್ರಾಮದೇವತೆಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಟ್ಟಣದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು ಚಾಲನೆ ನೀಡಿದರು.
ಭಗವಧ್ವಜ ಮತ್ತು ದೇವಿಯ ಆಯುಧ ತ್ರಿಶೂಲಕ್ಕೆ ಪೂಜೆ ಸಲ್ಲಿಸಿ, ವಿವಿಧ ದೇವತೆಗಳ ಘೋಷಣೆ ಮೊಳಗಿಸುವ ಮೂಲಕ ನೂರಾರು ಕಾರ್ಯಕರ್ತರ ಜೊತೆ ಮೊದಲ ದಿನದ ಧಾರ್ಮಿಕ ನಡಿಗೆಯು ನಸುಕಿನ 5.30ಕ್ಕೆ ದ್ಯಾಮವ್ವ ದೇವಿ ದೇವಸ್ಥಾನದಿಂದ ಹೊರಟು ಸುತ್ತಮುತ್ತಲಿನ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಿ ಪ್ರಥಮ ದಿನವನ್ನು ಮುಕ್ತಾಯಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಹತ್ತಿರ ಮಾತನಾಡಿದ ಶ್ರೀ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಈ ವಿಶಿಷ್ಟ ಕಾರ್ಯಕ್ರಮದ ರೂವಾರಿ ಗುರುನಾಥ ದಾನಪ್ಪನವರ ಅವರು. ಪ್ರಸ್ತುತ ದಿನಮಾನಗಳಲ್ಲಿ ಯುವಕರಲ್ಲಿ ಧಾರ್ಮಿಕ ಮೌಲ್ಯ ಹೆಚ್ಚಿಸುವ, ಧರ್ಮ ಜಾಗೃತಿ, ಧಾರ್ಮಿಕ ಕಲ್ಪನೆಗಳು ಉಳಿಯಬೇಕು ಎನ್ನುವ ಉದ್ದೇಶವು ಈ ಕಾರ್ಯಕ್ರಮದ್ದಾಗಿದೆ. ಧಾರ್ಮಿಕ ನೆಲೆಗಟ್ಟಿನ ಮೇಲೆ ಹಬ್ಬವನ್ನು ವೈಭವದಿಂದ ಆಚರಿಸುವ ಉದ್ದೇಶವಾಗಿದ್ದು, ಇದರಲ್ಲಿ ಎಲ್ಲರೂ ಸಮಾನತೆಯಿಂದ ಪಾಲ್ಗೊಳ್ಳುತ್ತಿದ್ದಾರೆ. ನಸುಕಿನ ಜಾವದಲ್ಲಿಯೇ ನೂರಾರು ಸಂಖ್ಯೆಯಲ್ಲಿ ಯುವಕರು, ಮಹಿಳೆಯರು ಪಾಲ್ಗೊಂಡಿರುವುದು ಸಂತೋಷದ ಸಂಗತಿಯಾಗಿದ್ದು, ಹಬ್ಬದ ಎಲ್ಲ ದಿನಗಳಲ್ಲಿಯೂ ಈ ಧಾರ್ಮಿಕ ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮದ ಶೋಭೆ ಹೆಚ್ಚಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವರ್ತಕ ಬಸವೇಶ ಮಹಾಂತಶೆಟ್ಟರ, ಮಹೇಶ್ ಹೊಗೆಸೊಪ್ಪಿನ್, ದುರ್ಗಾದೌಡ ಸಮಿತಿ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಪೂಜಾರ, ತಿಪ್ಪಣ್ಣ ಸಂಶಿ, ರವಿ ಲಿಂಗಶೆಟ್ಟಿ, ದೇವಪ್ಪ ಗಡೇದ, ರಾಜು ಗುಡಗೇರಿ, ಪ್ರಶಾಂತ ಪೋತದಾರ, ಉಮೇಶ ಕಟ್ಟಿಮನಿ, ಮಲ್ಲಪ್ಪ ಅಂಕಲಿ, ಪ್ರಕಾಶ ಮೇವುಂಡಿ, ಗುರಪ್ಪ ಮುಳಗುಂದ, ಎಂ.ಎಂ ಕಂದೋಜಿ, ರಾಜಶೇಖರ ಶಿಗ್ಲಿಮಠ, ಶಿವರಾಮ ಪಾಟೀಲಕುಲಕರ್ಣಿ, ಶಿವಣ್ಣ ಕಟಗಿ, ಕಮತದ, ಓಂಕಾರಿ, ಶಿವಣ್ಣ ಗಿಡಿಬಿಡಿ, ದ್ಯಾಮವ್ವ ದೇವಿ ದೇವಸ್ಥಾನ ಕಮಿಟಿ ಸರ್ವ ಸದಸ್ಯರು ಮತ್ತು ಕಾರ್ಯಕರ್ತರು ಇದ್ದರು.
ದಸರಾ ಉತ್ಸವ ಸಮಿತಿ ಸಂಚಾಲಕ ಬಸವರಾಜ ಅರಳಿ ಮಾತನಾಡಿ, ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ನಮ್ಮ ಭಾಗದಲ್ಲಿಯೇ ವಿಶಿಷ್ಟ ಕಾರ್ಯಕ್ರಮ ಇದಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆದಲ್ಲಿ ಧರ್ಮ ಜಾಗೃತಿ ಎಲ್ಲರಲ್ಲಿ ಮೂಡಿ ಬರುತ್ತದೆ ಎಂದು ಹೇಳಿದರು.