ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯಾದ್ಯಂತ ನಡೆಯುತ್ತಿರುವ ಆರ್ಥಿಕ, ಶೈಕ್ಷಣಿಕ ಸಮೀಕೆಯಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಯುಳ್ಳ ಮಠಾಧೀಶರು ರಾಜ್ಯದಲ್ಲಿ ಬಲಾಢ್ಯರಾಗಿರುವ ವೀರಶೈವರು, ಲಿಂಗಾಯತರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಶಿವರಾಮ ಕೃಷ್ಣ ಸೇವಾ ಸಂಸ್ಥೆಯ ಅಧ್ಯಕ್ಷ ರಾಜೂ ಖಾನಪ್ಪನವರ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ವೀರಶೈವರು, ಲಿಂಗಾಯತರ ಸಂಖ್ಯೆ ಹೆಚ್ಚಾಗಿದ್ದುದರಿಂದಲೇ ರಾಜ್ಯವನ್ನು ಬಹುಕಾಲ ಲಿಂಗಾಯತ ರಾಜಕೀಯ ನಾಯಕರೇ ಆಳಿದ್ದಾರೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಇಂತಹ ನಾಟಕವನ್ನಾಡುತ್ತಿದೆ. ಕೆಲ ಮಠಾಧೀಶರು ಜನಗಣತಿಯಲ್ಲಿ ವೀರಶೈವರು, ಲಿಂಗಾಯತರು ಧರ್ಮದ ಕಾಲಂನಲ್ಲಿ ಅಸ್ತಿತ್ವದಲ್ಲಿಯೇ ಇರದ ಲಿಂಗಾಯತ ಧರ್ಮ ಎಂದು ಬರೆಸುವಂತೆ ಸೂಚಿಸುವ ಮೂಲಕ ಸಮಾಜ ಬಾಂಧವರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ವಾಸ್ತವದಲ್ಲಿ ಸಮೀಕ್ಷೆಯ ನಮೂನೆಯಲ್ಲಿ ಲಿಂಗಾಯತ ಧರ್ಮದ ಕಾಲಂ ಇಲ್ಲವೇ ಇಲ್ಲ. ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವದರಿಂದ ವೀರಶೈವರು, ಲಿಂಗಾಯತರನ್ನು ಇತರೆ ವರ್ಗಕ್ಕೆ ಸೇರಿಸಲಾಗುತ್ತದೆ.
ಪರಿಣಾಮವಾಗಿ ರಾಜ್ಯದಲ್ಲಿ ವೀರಶೈವರು, ಲಿಂಗಾಯತರ ಸಂಖ್ಯೆ ಸಮೀಕ್ಷೆಯಲ್ಲಿ ಕಡಿಮೆಯಾಗುತ್ತದೆ. ಇದರಿಂದ ಕಾನೂನುಬದ್ಧವಾಗಿ ವೀರಶೈವರು, ಲಿಂಗಾಯತರಿಗೆ ದೊರೆಯಬೇಕಾದ ವಿವಿಧ ಸರಕಾರಿ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಆಡಳಿತಾರೂಢ ಸರ್ಕಾರದ ಯಾವದೋ ಪ್ರಲೋಭನೆಗೆ ಒಳಗಾಗಿರುವ ಕೆಲ ಮಠಾಧೀಶರು, ಪ್ರಗತಿಪರರ ಹೆಸರಿನಲ್ಲಿರುವ ಕೆಲ ಸಂಘಟನೆಗಳು ಹಿಂದೂ ಧರ್ಮದ ನಾಶಕ್ಕೆ ಸಂಚು ರೂಪಿಸುತ್ತಿವೆ. ಈ ಸಂಚಿಗೆ ನಾಡಿನ ವೀರಶೈವರು, ಲಿಂಗಾಯತರು ಯಾವುದೇ ಸಂದರ್ಭದಲ್ಲಿಯೂ ಬಲಿಯಾಗಿ ಸನಾತನ ಧರ್ಮ ಒಡೆಯಲು ಅವಕಾಶ ನೀಡಬಾರದೆಂದು ಮನವಿ ಮಾಡಿದ್ದಾರೆ.