ವಿಜಯಸಾಕ್ಷಿ ಸುದ್ದಿ, ಗದಗ: ನಗರದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಸಹದೇವಾನಂದ ಗಿರಿಜೀ ಮಹಾರಾಜ್ ನೇತೃತ್ವದಲ್ಲಿ ಲೋಕಕಲ್ಯಾಣಕ್ಕಾಗಿ ಅತಿರುದ್ರ ಮಹಾಯಜ್ಞ ಹಾಗೂ ಕಿರು ಕುಂಭಮೇಳ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ರವಿ ದಂಡಿನ ಹೇಳಿದರು.
ಬುಧವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಧರ್ಮಧ್ವಜವನ್ನು ಸ್ಥಾಪಿಸಿದ, ಸಹದೇವಾನಂದ ಗಿರಿಜೀ ಮಹಾರಾಜರ ನೇತೃತ್ವದಲ್ಲಿ ಮಹಾಯಜ್ಞ ನಡೆಯುತ್ತಿರುವುದು ಸಂತೋಷ ತಂದಿದೆ. ಈ ಧಾರ್ಮಿಕ ಕಾರ್ಯಕ್ರಮವು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಡೆಯಲಿದೆ ಎಂದು ತಿಳಿಸಿದರು.
ಸಹದೇವಾನಂದ ಗಿರಿಜೀ ಮಹಾರಾಜರು ನಾಗಾ ಸಾಧು ದೀಕ್ಷೆ ಪಡೆದು ಹಲವು ವರ್ಷಗಳ ಕಾಲ ಹಿಮಾಲಯದಲ್ಲಿ ತಪಸ್ಸು ಮಾಡಿ, 12.5 ಲಕ್ಷ ನಾಗಾ ಸಾಧುಗಳಿರುವ ಜುನಾ ಅಖಾಡಾ ಸಮೂಹಕ್ಕೆ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಕುಷ್ಟಗಿ ನಗರದಲ್ಲಿ ಮಠವನ್ನು ಸ್ಥಾಪಿಸಿ, ಇಳಕಲ್ ನಗರದಲ್ಲಿ ಅತಿರುದ್ರ ಮಹಾಯಜ್ಞ ಹಾಗೂ ಕಿರು ಕುಂಭಮೇಳವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಗದಗದಲ್ಲಿಯೂ ಅಂಥದ್ದೊಂದು ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ದತ್ತಾ ಡೆವಲಪರ್ಸ್ನ ಕಿರಣ ಬೂಮಾ ಮಾತನಾಡಿ, ನವೆಂಬರ್ 11ರಿಂದ 18ರವರೆಗೆ ಮಹಾಯಜ್ಞ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ರುದ್ರಾಕ್ಷಿಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯ ಅನೇಕ ಧಾರ್ಮಿಕ ಮುಖಂಡರು, ವಿವಿಧ ಸಮಾಜದ ಪ್ರಮುಖರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಜೊತೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದೆ. ಅಲ್ಲದೇ ಸೆ. 28ರಂದು ಎಸ್ಬಿಎಸ್ ಕಾರ್ಡನ್ನಲ್ಲಿ ಮತ್ತೆ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಚ್. ಶಿವನಗೌಡ್ರ, ವಿಜಯಲಕ್ಷ್ಮೀ ಮಾನ್ವಿ, ಫಕೀರಸಾ ಭಾಂಡಗೆ, ಎನ್. ರಾಮರಾವ್, ಬಸವರಾಜ ಬಿಂಗಿ, ಮಹೇಶಗೌಡ ತಲೇಗೌಡರ, ತೋಂಟೇಶ ವೀರಲಿಂಗಯ್ಯನಮಠ, ಗೋಪಾಲ ಅಗರವಾಲ ಇತರರು ಉಪಸ್ಥಿತರಿದ್ದರು.



