ವಿಜಯಸಾಕ್ಷಿ ಸುದ್ದಿ, ಗದಗ
ಕಳೆದ 36 ಗಂಟೆಗಳ ಕಾಲ ತೀವ್ರ ವಿಚಾರಣೆಗೊಳಪಟ್ಟ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಅವರನ್ನು ಎಸಿಬಿ ಪೊಲೀಸರು ಇನ್ನೂ ಬಂಧಿಸಿಲ್ಲ.
ಇದು ಗದಗ ಬೆಟಗೇರಿ ಅವಳಿ ನಗರದ ಜನತೆಯ ಊಹಾಪೋಹಗಳಿಗೆ ಕಾರಣವಾಗಿದೆ. ಹತ್ತು ಸಾವಿರ ಲಂಚ ಪಡೆದ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅನಿಲಕುಮಾರ್ ಮುದ್ದಾ ಅವರನ್ನು ಗುರುವಾರ ರಾತ್ರಿ ಬಂಧನ ಮಾಡುವ ಮೂಲಕ ಪ್ರಕರಣದ ಎರಡನೇ ಆರೋಪಿಯನ್ನು ಬಂಧಿಸಿದಂತಾಗಿದೆ. ಆದರೆ ದೊಡ್ಡ ಮೊತ್ತ ಕೇಳಿದ, ಅದೂ ಸಾಕ್ಷಿ, ಆದಾರ ಇದ್ದಾಗಲೂ ಆಯುಕ್ತರ ಬಂಧನ ವಿಳಂಬವಾಗಲು, ವಿಚಾರಣೆಯ ನೆಪದಲ್ಲಿ ಕಾಲಹರಣ ಮಾಡುವ ತನಿಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಬರೊಬ್ಬರಿ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಅವರನ್ನು ಇದುವರೆಗೂ ಬಂಧಿಸದ ಕಾರಣ ಸಾರ್ವಜನಿಕ ವಲಯದಲ್ಲಿ ಸಂಶಯಕ್ಕೆ ಕಾರಣವಾಗಿದೆ.
ನಗರಸಭೆ ಆಯುಕ್ತರು ವಿಜಯಪುರದಿಂದ ವರ್ಗಾವಣೆ ಆಗಿ ಬಂದಿದ್ದೆ ದೊಡ್ಡ ವಿವಾದ ಆಗಿತ್ತು. ಆಯುಕ್ತರ ಹುದ್ದೆಗೆ ಅರ್ಹತೆ ಇರದಿದ್ದರೂ ರಾಜಕಾರಣಿಯೊಬ್ಬರ ಸ್ವಹಿತಾಸಕ್ತಿಯಿಂದ ಕುರ್ಚಿಗೆ ಬಂದು ಕುಳಿತಿದ್ದು ಗದಗನ ಜನತೆ ಮರೆತಿಲ್ಲ. ಹೀಗಾಗಿಯೇ ಈ ಪ್ರಕರಣದಲ್ಲೂ ರಾಜಕಾರಣಿಗಳು ಒತ್ತಡ ಹಾಕಿ ಬಂಧಿಸದಂತೆ ನೋಡಿಕೊಳ್ಳುವ ಹಾಗೂ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಳ್ಳದಂತೆ ಏನಾದರೂ ಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಕೇಳಿ ಬರ್ತಾ ಇದೆ.
ಇದನ್ನೂ ಓದಿ ನಗರಸಭೆ ಕಚೇರಿ ಮೇಲೆ ಎಸಿಬಿ ದಾಳಿ; ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಎಇಇ ಬಂಧನ
ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಗದಗನಲ್ಲೂ ಛಾಪು ಮೂಡಿಸಿದ್ದ ನ್ಯಾಮಗೌಡ ಸಾಹೇಬರು ಈಗ ಎಸಿಬಿಯ ಎಸ್ಪಿಯಾಗಿದ್ದಾರೆ. ಅವರು ಈ ಪ್ರಕರಣದಲ್ಲಿ ಯಾವುದೇ ಒತ್ತಡ ಬಂದರೂ ಮಣಿಯಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ.
ಈ ಕುರಿತು ಎಸಿಬಿ ಎಸ್ಪಿ ನ್ಯಾಮಗೌಡ ಅವರು ವಿಜಯಸಾಕ್ಷಿಗೆ ಪ್ರತಿಕ್ರಿಯೆ ನೀಡಿದ್ದು, ಗದಗ ನಗರಸಭೆ ಆಯುಕ್ತರ ಪ್ರಕರಣದಲ್ಲಿ ಯಾವುದೇ ಒತ್ತಡ ಇಲ್ಲ. ಎಲ್ಲವೂ ಕಾನೂನಿನ ಪ್ರಕಾರ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ ಲಂಚ ಸ್ವೀಕಾರ ಪ್ರಕರಣ, ಅನಿಲ್ ಮುದ್ದಾ ಅಂದರ್; ಎಸಿಬಿಯಿಂದ ಮುಂದುವರೆದ ರಮೇಶ್ ಜಾಧವ್ ವಿಚಾರಣೆ
ಪ್ರಕರಣ ಹಿನ್ನೆಲೆ
ಹಳೆಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ ಹೊಸ ಘಟಕಕ್ಕೆ ಮಣ್ಣು ಸಾಗಾಟ ಮಾಡಿದ ಬಿಲ್ ಪಾಸು ಮಾಡಲು ನಗರಸಭೆ ಎಇಇ ವರ್ಧಮಾನ್ ಹುದ್ದಾರ್, ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಕಾರ್ಯ ಪಾಲಕ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಲಂಚದ ಬೇಡಿಕೆ ಇಟ್ಟಿದ್ದರು.
ಅನಿಲಕುಮಾರ್ ಮುದ್ದಾ ಅವರಿಗೆ ಜುಲೈ 05 ರಂದು 10 ಸಾವಿರ ಹಣ ಪಡೆದಿದ್ದರು. ನಗರಸಭೆ ಆಯುಕ್ತ ರಮೇಶ್ ಜಾಧವ್ ಕೂಡ 1.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹಾಗೆಯೇ ನಗರಸಭೆಯ ಎಇಇ ವರ್ಧಮಾನ್ ಹುದ್ದಾರ್ 40 ಸಾವಿರ ಹಣ ಕೇಳಿದ್ದರು ಎಂದು ಹೇಳಲಾಗುತ್ತದೆ. ಇದರಿಂದ ನೊಂದ ಗುತ್ತಿಗೆದಾರ ಅಬ್ದುಲ್ ಸಲಾಮ್ ಮನಿಯಾರ್ ಎಸಿಬಿಗೆ ದೂರು ನೀಡಿದ್ದರು.
ಆ ಪ್ರಕಾರ ಬುಧವಾರ ಸಂಜೆ 25 ಸಾವಿರ ಹಣ ಪಡೆಯುತ್ತಿದ್ದಾಗ ಎಇಇ ಹುದ್ದಾರ್ ಅವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿಲಾಗಿತ್ತು.
ಹುದ್ದಾರ್ ಅವರ ಬಂಧನದ ನಂತರ ನಗರಸಭೆ ಆಯುಕ್ತ ರಮೇಶ್ ಪಾಂಡುರಂಗ ಜಾಧವ್ ಹಾಗೂ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ್ ಮುದ್ದಾ ಅವರನ್ನು ಎಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದರು. ಗುರುವಾರ ರಾತ್ರಿ ಅನಿಲಕುಮಾರ್ ಮುದ್ದಾ ಅವರನ್ನು ಬಂಧಿಸಲಾಗಿದೆ.