ವಿಜಯಸಾಕ್ಷಿ ಸುದ್ದಿ, ಲಕ್ಷೇಮೇಶ್ವರ: ಶರಣಾಗತಿಯ ಭಾವ ಬರದೆ ಇದ್ದರೆ ಶರಣರಾಗುವುದು ಸಾಧ್ಯವಿಲ್ಲ. ಶರಣರು ಎಂದರೆ ಅರಿವು ಮತ್ತು ಆಚಾರ ಒಂದಾದವರು. ಅಂತಹ ಶರಣರ ಚಿಂತನೆಗಳು ಸದಾ ಕಾಲಕ್ಕೂ ಪ್ರಸ್ತುತವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಗಂಜಿಗಟ್ಟಿ ಚರಮೂರ್ತೇಶ್ವರಮಠದ ಡಾ. ವೈಜನಾಥ ಶಿವಲಿಂಗೇಶ್ವರ ಮಹಾಸ್ವಾಮಿಗಳು ನುಡಿದರು.
ಅವರು ಶುಕ್ರವಾರ ಪಟ್ಟಣದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಇವುಗಳ ಆಶ್ರಯದಲ್ಲಿ ದತ್ತಿದಾನಿಗಳಾದ ಚಿದಾನಂದಯ್ಯ ಹಿರೇಮಠ ಮತ್ತು ವಿಜಯಕುಮಾರ ಹಿರೇಮಠ ಅವರು ನೀಡಿದ ಲಿಂ. ಶರಣ ಸಿದ್ದರಾಮದೇವರು ಹಿರೇಮಠ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಯ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶರಣರು ವಾಸ್ತವವಾದಿಗಳಾಗಿರುವಂತೆ ವಿಜ್ಞಾನಿಗಳೂ ಹೌದು. ಹಾಗಾಗಿ ಅವರು ವೇದ, ಶಾಸ್ತ್ರ, ಪುರಾಣ, ಆಗಮಗಳಿಂದ ದೂರವಿದ್ದವರು. ಶರಣರ ಇಂದ್ರಿಯ, ಮನಸ್ಸು, ಬುದ್ಧಿಯ ಚಿಂತನ ಮಂಥನದ ನಿಕಷಕ್ಕೆ ಒಳಪಟ್ಟು ಹೊರಬಂದ ಅಮೃತ ನುಡಿಗಳು ಇಂದಿಗೂ ಪ್ರಸ್ತುತವಿದ್ದು, ಅವುಗಳನ್ನು ಅಳವಡಿಸಿಕೊಳ್ಳುವ ಕಾರ್ಯವಾಗಬೇಕಾಗಿದೆ. ಲಿಂ. ಸಿದ್ದರಾಮದೇವರು ಧಾರ್ಮಿಕ ಚಿಂತನೆಯ ಜೊತೆಗೆ ಸಾಮಾಜಿಕ ಚಿಂತನೆಯನ್ನು ಹೊಂದಿದ್ದರು. ಸದಾ ಒಳ್ಳೆಯತನಕ್ಕಾಗಿ ಅವರ ಜೀವನ ತುಡಿಯುತ್ತಿತ್ತು ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಜಿ. ಎಸ್. ಗಡ್ಡದೇವರಮಠ ಮಾತನಾಡಿ, ಲಿಂ. ಸಿದ್ದರಾಮದೇವರು ಹಿರೇಮಠ ಅಪರೂಪದ ವ್ಯಕ್ತಿತ್ವ ಹೊಂದಿದ್ದ ಶರಣರಾಗಿದ್ದರು. ಕುಟುಂಬದ ನಿರ್ವಹಣೆಯ ಜೊತೆ ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದರು.ಶರಣರ ಚಿಂತನೆಗಳ ಕುರಿತು ಪ್ರೊ. ಸೋಮಶೇಖರ ಕೆರಿಮಣಿ ಉಪನ್ಯಾಸ ನೀಡಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಸವರಾಜ ಬಾಳೇಶ್ವರಮಠ, ವಿಜಯಪುರ జిల్లా ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಡಾ. ಉಷಾದೇವಿ ಹಿರೇಮಠ, ತಾಲೂಕಾ ಶಾಸಾಪ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ಗದಗ ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ನಿರ್ಮಲಾ ಅರಳಿ, ದತ್ತಿ ದಾನಿಗಳಾದ ಚಿದಾನಂದಯ್ಯ ಹಿರೇಮಠ ಮತ್ತು ವಿಜಯಕುಮಾರ ಹಿರೇಮಠ ಮುಂತಾದರು. ಬಸವರಾಜ ಸಂಗಪ್ಪಶೆಟ್ಟರ ಸ್ವಾಗತಿಸಿದರು, ರೇಖಾ ವಡಕಣ್ಣವರ ನಿರೂಪಿಸಿದರು. ಎಂ.ಕೆ. ಕಳ್ಳಿಮಠ ವಂದಿಸಿದರು.
ನೇತೃತ್ವ ವಹಿಸಿದ್ದ ಬನ್ನಿಕೊಪ್ಪ ಜಪದಕಟ್ಟಿಮಠದ ಡಾ. ಸುಜ್ಞಾನದೇವ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಮನುಷ್ಯನ ಶಾಂತಿ, ನೆಮ್ಮದಿ ಬದುಕು, ಉನ್ನತಿಗೆ ಶರಣರ ತತ್ವ ಚಿಂತನೆಗಳು ಅವಶ್ಯವಾಗಿವೆ. ಈ ನಿಟ್ಟಿನಲ್ಲಿ ಮನೆ-ಮನಗಳಿಗೆ ಶರಣರ ಸಂದೇಶ ತಲುಪಬೇಕಿದೆ, ಶರಣರ ಚಿಂತನೆಗಳು ಒಂದೇ ಸಮಾಜಕ್ಕೆ ಸೀಮಿತವಾಗದೇ ಎಲ್ಲವರ್ಗವನ್ನು ಪ್ರತಿನಿಧಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿವೆ. ಈ ನಿಟ್ಟಿನಲ್ಲಿ ಲಿಂ. ಶರಣ ಸಿದ್ದರಾಮದೇವರು ತಮ್ಮ ನಡೆನುಡಿಗಳ ಮೂಲಕ ನಾಡಿಗೆ ಒಳ್ಳೆಯ ಸಂದೇಶವನ್ನು ನೀಡುತ್ತಾ ಬರುತ್ತಿದ್ದರು. ಧಾರ್ಮಿಕ ಚಿಂತನೆಗಳ ಜೊತೆ ಮಠಾಧೀಶರನ್ನು, ಶಿವಾಚಾರ್ಯರ ಬಗ್ಗೆ ಸಮಾಜದಲ್ಲಿ ಉತ್ತಮ ಬಾಂಧವ್ಯ ಬೆಸೆಯುವಂತೆ ಮಾಡಿದ್ದರು ಎಂದರು.