ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಎಸ್.ಎಚ್. ಬಾದನಟ್ಟಿ ಅವರಿಗೆ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಖಜಾನೆ ಇಲಾಖೆ, ಜಿಲ್ಲಾ ಖಜಾನೆ ಇಲಾಖೆ ನೌಕರರ ಸಂಘ ಹಾಗೂ ಉಪಖಜಾನೆಗಳ ವತಿಯಿಂದ ಆತ್ಮೀಯ ಅಭಿನಂದನಾ ಹಾಗೂ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಸರ್ಕಾರಿ ನೌಕರರು ಸಾರ್ವಜನಿಕರ ಸಮಸ್ಯೆಗಳಿಗೆ ಸೌಜನ್ಯ ಹಾಗೂ ಸಹನೆಯಿಂದ ಸ್ಪಂದಿಸಬೇಕು. ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ. ಎಸ್.ಎಚ್. ಬಾದನಟ್ಟಿಯವರು ಶಾಂತ ಸ್ವಭಾವ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ಗುಣಗಳಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ಮಾತನಾಡಿ, ಬಾದನಟ್ಟಿಯವರ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಹಾಗೂ ಸಕಾರಾತ್ಮಕ ಮನೋಭಾವವನ್ನು ಶ್ಲಾಘಿಸಿ, ಅವರ ನಿವೃತ್ತಿ ಜೀವನ ಸುಖ-ಶಾಂತಿಯುತವಾಗಿರಲಿ ಎಂದು ಹಾರೈಸಿದರು.
ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎಸ್.ಜಿ. ಪಲ್ಲೇದ ಮಾತನಾಡಿ, ಸರ್ಕಾರಿ ಸೇವೆಯಿಂದ ನಿವೃತ್ತರಾದರೂ ಸಮಾಜಸೇವೆಯ ಪ್ರವೃತ್ತಿ ಮುಂದುವರಿಯಬೇಕು. ಬಾದನಟ್ಟಿಯವರ ಪ್ರಾಮಾಣಿಕತೆ ಮತ್ತು ಕರ್ತವ್ಯತತ್ಪರತೆ ಸದಾ ಸ್ಮರಣೀಯವಾಗಿರುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿಕಟಪೂರ್ವ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಗ ಹಾಗೂ ಜಿಲ್ಲಾ ಖಜಾನೆ ಉಪನಿರ್ದೇಶಕ ವಿ. ಹರಿನಾಥ ಬಾಬು ಅವರು ಬಾದನಟ್ಟಿಯವರ ಸೇವಾ ಮನೋಭಾವ, ಸಮಯಪ್ರಜ್ಞೆ ಹಾಗೂ ಸಹೋದ್ಯೋಗಿಗಳಿಗೆ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಸ್.ಎಚ್. ಬಾದನಟ್ಟಿ ದಂಪತಿಯನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಬಸವರಾಜ ಕಡೆಮನಿ, ಕೆ.ಎ. ಸರ್ಫರಾಜ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಖಜಾನೆ, ಉಪಖಜಾನೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಶ್ರೀಮತಿ ಯಲ್ಲಮ್ಮ ಲಮಾಣಿ ಪ್ರಾರ್ಥಿಸಿದರು. ಎಸ್.ಬಿ. ಹದ್ಲಿ ಸ್ವಾಗತಿಸಿದರು. ಉಮೇಶ ಅಸುಂಡಿ ನಿರೂಪಿಸಿದರು. ಉಳವೇಶ ಸಿದ್ದನ್ನವರ ವಂದಿಸಿದರು.
“ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ಸಹನೆ ಮತ್ತು ಸಾರ್ವಜನಿಕರ ಬಗ್ಗೆ ಸ್ಪಂದಿಸುವ ಮನೋಭಾವವೇ ನೌಕರನ ನಿಜವಾದ ಆಸ್ತಿ. ಎಸ್.ಎಚ್. ಬಾದನಟ್ಟಿಯವರ ಸೇವೆ ಎಲ್ಲರಿಗೂ ಮಾದರಿಯಾಗಿದೆ.”
– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ, ಗದಗ



