ವಿಜಯನಗರ: ಜಿಲ್ಲೆಯ ಹಡಗಲಿ–ಮೋರಗೇರಿ ರಸ್ತೆಯ ಹೊಳಗುಂದಿ ಕೆ.ಇ.ಬಿ. ಗ್ರೀಡ್ ಸಮೀಪ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಗದ್ದಿಕೇರಿ ಗ್ರಾಮದ ನಿವಾಸಿಗಳಾದ ಸುಗ್ನಳ್ಳಿ ಹನುಮರೆಡ್ಡಿ (63) ಹಾಗೂ ಸುಗ್ನಳ್ಳಿ ಬಸವರೆಡ್ಡಿ (58) ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಹನುಮರೆಡ್ಡಿ ಅವರು ಗದಗಿನಲ್ಲಿ ಸಂಬಂಧಿಕರ ತಿಥಿ ಕಾರ್ಯ ಮುಗಿಸಿಕೊಂಡು ರಾತ್ರಿ ಹಡಗಲಿಗೆ ವಾಪಸ್ಸಾಗಿದ್ದರು. ಗದ್ದಿಕೇರಿಗೆ ಬಸ್ ಸೌಲಭ್ಯ ಇಲ್ಲದ ಕಾರಣ, ಸಂಬಂಧಿ ಬಸವರೆಡ್ಡಿಗೆ ಕರೆಮಾಡಿ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಸವರೆಡ್ಡಿ ಅವರು ತಮ್ಮ ಬೈಕ್ ನಲ್ಲಿ ಹನುಮರೆಡ್ಡಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಬರುತ್ತಿದ್ದಾಗ ದುರಂತ ಸಂಭವಿಸಿದೆ.
ಈ ವೇಳೆ ಅಪರಿಚಿತ ವಾಹನ ವೇಗವಾಗಿ ಬಂದು ಬೈಕ್ ಗೆ ಡಿಕ್ಕಿ ಹೊಡಿದಿದೆ. ಇನ್ನೂ ಡಿಕ್ಕಿ ರಭಸಕ್ಕೆ ಬೈಕ್ ನಲ್ಲಿದ್ದ ಸುಗ್ನಳ್ಳಿ ಹನುಮರೆಡ್ಡಿ, ಸುಗ್ನಳ್ಳಿ ಬಸವರೆಡ್ಡಿ ರಸ್ತೆಗೆ ಬಿದ್ದಿದ್ದು,. ಗಂಭೀರ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ಸಂಜೀವರೆಡ್ಡಿ ಶನಿವಾರ ಮಧ್ಯರಾತ್ರಿ 12:30ಕ್ಕೆ ಹಡಗಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದರ ಆಧಾರದಲ್ಲಿ ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 142/2025 ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281, 106 ಹಾಗೂ ಐಎಂವಿ ಕಾಯಿದೆ ಕಲಂ 187 ರಡಿ ಪ್ರಕರಣ ದಾಖಲಾಗಿದೆ.
ಈ ದುರಂತ ಘಟನೆಯಿಂದ ಗದ್ದಿಕೇರಿ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಸ್ಥಳೀಯರು ಆರೋಪಿಯನ್ನು ಬೇಗ ಬಂಧಿಸಲು ಒತ್ತಾಯ ವ್ಯಕ್ತಪಡಿಸಿದ್ದಾರೆ. ಸಿಪಿಐ ದೀಪಕ್ ಆರ್. ಭೂಸರೆಡ್ಡಿ, ಅಪಘಾತಕ್ಕೆ ಕಾರಣವಾದ ವಾಹನ ಮತ್ತು ಚಾಲಕನ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ.