ಬೆಂಗಳೂರು:- ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರಂಭಿಸಿರುವ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಕುರಿತು ಜೆಡಿಎಸ್ ಕಠಿಣ ಟೀಕೆ ವ್ಯಕ್ತಪಡಿಸಿದೆ.
ಬಂಡೆ ಕಲ್ಲಿನಂತ ಹೃದಯದವರಿಗೆ ಜನರ ಕಷ್ಟ ಅರ್ಥವಾಗಲ್ಲ. ಬೆಂಗಳೂರಿನಲ್ಲಿ ಮಳೆಯಿಂದಾಗಿ ಉಂಟಾಗಿರುವ ಭಾರೀ ಅನಾಹುತದ ನಡುವೆಯೂ, ಡಿಕೆಶಿ ನಡಿಗೆ ಕಾರ್ಯಕ್ರಮವನ್ನು ಮುಂದುವರೆಸುತ್ತಿರುವುದು ಗಂಭೀರ ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಜೆಡಿಎಸ್ ಆರೋಪಿಸಿದೆ.
ಬೆಳಿಗ್ಗೆ ದಿನಪತ್ರಿಕೆಗಳನ್ನು ಓದಿದರೆ ಸಾಕು — ಜನರು ಹೇಗೆ ಸಂಕಷ್ಟದಲ್ಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ರಸ್ತೆಗಳು ಹಾಳಾಗಿದ್ದು, ಬಹುತೇಕ ಪ್ರದೇಶಗಳು ಜಲಾವೃತವಾಗಿವೆ. ಜನಸಾಮಾನ್ಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಬಳಿಗೆ ಹೋಗಿ ಅವರ ಸಮಸ್ಯೆಗಳನ್ನು ಕೇಳುವುದು ಉಪಮುಖ್ಯಮಂತ್ರಿಯ ಪ್ರಾಥಮಿಕ ಹೊಣೆಗಾರಿಕೆಯಲ್ಲವೇ?” ಎಂದು ಪ್ರಶ್ನಿಸಿದೆ.
ಇದೇ ವೇಳೆ, “ಲಾಲ್ಬಾಗ್, ಜೆಪಿ ಪಾರ್ಕ್, ಕಬ್ಬನ್ ಪಾರ್ಕ್ ನಡಿಗೆಗಳಿಂದ ನಗರ ದುರಸ್ಥಿ ಸಮಸ್ಯೆ ಪರಿಹಾರ ಆಗಲಾರದು. ಬದಲಿಗೆ ನಿಕಟ ಸಮಯದಲ್ಲಿ ತುರ್ತು ನಿರ್ವಹಣೆ, ಸಮರ್ಪಕ ಪರಿಹಾರ, ಮತ್ತು ಶಾಶ್ವತ ಯೋಜನೆಗಳನ್ನು ಜಾರಿಗೊಳಿಸುವ ಅಗತ್ಯವಿದೆ” ಎಂದು ಜೆಡಿಎಸ್ ಅಭಿಪ್ರಾಯ ವ್ಯಕ್ತಪಡಿಸಿದೆ.
ತೀವ್ರ ಮಳೆಯಿಂದಾಗಿ ರಸ್ತೆಗಳು ಯಮಗುಂಡಿಗಳಿಂದ ಕೂಡಿದ್ದು ಜನರನ್ನು ಬಲಿ ಪಡಿಯುತ್ತಿವೆ. ಒಂದೇ ವಾರದಲ್ಲಿ ಬಿಎಂಟಿಸಿಗೆ ನಾಲ್ವರು ಬಲಿಯಾಗಿದ್ದಾರೆ. ಇವೆಲ್ಲವೂ ನಿಮ್ಮ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿ. ಇದೇನಾ ನೀವು ಬೆಂಗಳೂರಿನ ನಾಗರಿಕರಿಗೆ ಸ್ಪಂದಿಸುವ ಪರಿ? ಜನಸ್ನೇಹಿ, ಮಾತೃ ಹೃದಯಿಗಳಿಗಷ್ಟೇ ಜನಪರ ಆಡಳಿತ ನೀಡಲು ಸಾಧ್ಯ. ಬಂಡೆ ಕಲ್ಲಿನಂತ ಹೃದಯ ಇರುವ ನಿಮಗೆ ಜನರ ಸಂಕಷ್ಟ ಹೇಗೆ ತಾನೆ ಅರ್ಥವಾಗುತ್ತದೆ? ಎಂದು ಜೆಡಿಎಸ್ ಕಿಡಿ ಕಾರಿದೆ.