ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು: ಸಿಎಂ ಸಿದ್ದರಾಮಯ್ಯ

0
Spread the love

ಪುತ್ತೂರು: ಸಮ ಸಮಾಜ ನಿರ್ಮಾಣವಾಗಲು ಉಳ್ಳವರು ಇಲ್ಲದವರಿಗೆ ಕೊಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಪುತ್ತೂರು ಇವರ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಶೋಕ ಜನ-ಮನ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಅಶೋಕ್ ಅವರು ಕಾಂಗ್ರೆಸ್ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ವತಿಯಿಂದ ಪ್ರತಿ ವರ್ಷ ವಸ್ತ್ರದಾನ ಮಾಡುವ ಕಾರ್ಯವನ್ನು 13 ವರ್ಷಗಳಿಂದ ಮಾಡ್ತಾ ಬರುತ್ತಿದ್ದಾರೆ. ಒಂದು ಲಕ್ಷ ಜನರಿಗೆ ಇಂದು ವಸ್ತ್ರದಾನ ಮಾಡುತ್ತಿದ್ದಾರೆ. ಇತರರಿಗೆ ಅವರು ಸ್ಫೂರ್ತಿಯಾಗಲಿ ಎಂದರು.

ಸಮಾಜದಲ್ಲಿನ ದುರ್ಬಲರಿಗೆ ತಮ್ಮ ಗಳಿಕೆಯ ಒಂದು ಭಾಗವನ್ನು ನೀಡುವುದು ಒಳ್ಳೆಯ ಕೆಲಸ ಎಂದರು. ಸಮ ಸಮಾಜ ನಿರ್ಮಾಣ ಸಂವಿಧಾನದ ಉದ್ದೇಶ. ಕಾಯಕ ಮತ್ತು ದಾಸೋಹ ತತ್ವವನ್ನು ಬಸವಣ್ಣ ನಮಗೆ ನೀಡಿದ್ದಾರೆ ಎಂದರು.

ಸಹಿಷ್ಣುತೆ, ಸಹಬಾಳ್ವೆ ಅಗತ್ಯ

ನಮ್ಮ ನಾಡು ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬೇಕು. ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಪರಸ್ಪರ ಕಚ್ಚಾಡುವ, ಅಸಮಾನತೆವುಳ್ಳ ಸಮಾಜ ನಿರ್ಮಾಣವಾಗಬಾರದು. ಇತರೆ ಧರ್ಮಗಳ ಬಗ್ಗೆ ಸಹಿಷ್ಣುತೆ ಅಗತ್ಯ. ಸಹಬಾಳ್ವೆ ಇರಬೇಕು. ಇದನ್ನು ಎಲ್ಲರೂ ಪಾಲಿಸಿದಾಗ ಸಂವಿಧಾನದ ಧ್ಯೇಯೋದ್ದೇಶಗಳನ್ನು ಪಾಲಿಸಿದಂತಾಗುತ್ತದೆ ಎಂದರು.

ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ

ರಾಜ್ಯ ಹಸಿವು ಮುಕ್ತವಾಗಬೇಕೆಂದು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಶಕ್ತಿ ಯೋಜನೆ ಜಾರಿಯಾದ ನಂತರ ತಲಾ ಆದಾಯದಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸುತ್ತಾರೆ. ಸರ್ಕಾರದ ಬಳಿ ಹಣವಿಲ್ಲದಿದ್ದರೆ ಕಾಂಗ್ರೆಸ್ ಸರ್ಕಾರ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 2500 ಕೋಟಿ ರೂ. ಗಳ ಅನುದಾನ ಕೊಡಲು ಸಾಧ್ಯವಾಗುತ್ತಿತ್ತೆ ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಜಾತಿ ಧರ್ಮದ ಹೆಸರಿನಲ್ಲಿ ಜಗಳ ಉಂಟು ಮಾಡುವುದಕ್ಕೆ ಕಡಿವಾಣ

ಟೀಕೆ ಮಾಡುವವರು ಸುಮ್ಮನೆ ಟೀಕೆ ಮಾಡುತ್ತಾರೆ. ಏಕೆಂದರೆ ಜಾತಿ ಧರ್ಮದ ಹೆಸರಿನಲ್ಲಿ ಜಗಳ ತರುವುದರಲ್ಲಿ ಜಿಲ್ಲೆ ನಂಬರ್ ಒನ್ ಸ್ಥಾನದಲ್ಲಿತ್ತು. ಅದಕ್ಕೆಲ್ಲಾ ನಮ್ಮ ಸರ್ಕಾರ ಕಡಿವಾಣ ಹಾಕಿದೆ ಎಂದರು. ಜಾತಿ ಧರ್ಮ ಎಂದು ಜಗಳ ತರುವವರ ಮಕ್ಕಳನ್ನು ಇದಕ್ಕೆ ಕಳಿಸುವುದಿಲ್ಲ. ಬಡವರ ಮಕ್ಕಳನ್ನು, ಅಮಾಯಕರನ್ನು ಕಳಿಸುತ್ತಾರೆ. ದಕ್ಷ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಈಗ ಸುಧಾರಣೆಯಾಗಿದೆಯಲ್ಲವೆ ಎಂದು ಕೇಳಿದರು. ಪೋಲಿಸ್ ಅಧಿಕಾರಿಗಳು ದಕ್ಷರಾಗಿದ್ದರೆ ಬದಲಾವಣೆ ತರಲು ಸಾಧ್ಯ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಅನ್ಯೋನ್ಯತೆಯಿಂದ ಕೆಲಸ ಮಾಡಬೇಕು ಎಂದರು.

ಪುತ್ತೂರಿನಲ್ಲಿಯೇ ವೈದ್ಯಕೀಯ ಕಾಲೇಜು
ಬಜೆಟ್ ನಲ್ಲಿ ಘೋಷಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಕೀಯ ಕಾಲೇಜು ಪುತ್ತೂರಿನಲ್ಲಿಯೇ ನಿರ್ಮಾಣವಾಗಲಿದೆ ಈ ಬಗ್ಗೆ ಯಾರಿಗೂ ಅನುಮಾನ ಬೇಡವೆಂದು ಮುಖ್ಯಮಂತ್ರಿಗಳು ತಿಳಿಸಿದರು. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ ಎಂದರು.


Spread the love

LEAVE A REPLY

Please enter your comment!
Please enter your name here