ಚಿಕ್ಕಮಗಳೂರು: ದೇವಿರಮ್ಮನ ಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಹಿನ್ನೆಲೆ, ಪ್ರತಿ ವರ್ಷದಂತೆ ಮೈಸೂರು ಅರಸರ ಮನೆತನದಿಂದ ದೇವಿಗೆ ಬಾಗಿನ ಅರ್ಪಣೆ ಮಾಡಲಾಗಿದೆ.
ಅನಾದಿ ಕಾಲದಿಂದಲೂ ಅರಸರ ಮನೆತನದಿಂದ ಜಾತ್ರೆಯಲ್ಲಿ ದೇವಿರಮ್ಮನಿಗೆ ಬಾಗಿನ ಕೊಡುವ ಸಂಪ್ರದಾಯವಿದೆ. ಮೈಸೂರು ಸಂಸ್ಥಾನದ ಪರವಾಗಿ ಆಗಮಿಸಿದ ಅರಸು ಸಂಘದ ರಾಜ್ಯಾಧ್ಯಕ್ಷ ದಿನೇಶ್ ಅವರ ತಂಡಕ್ಕೆ ದೇವಾಲಯದ ಆಡಳಿತ ಮಂಡಳಿ ಸ್ವಾಗತಿಸಿತು. ಬಳಿಕ ಹಣ್ಣು, ಕಾಯಿ, ವಿಲ್ಯದೆಲೆ, ಸೀರೆ, ಅರಿಶಿನ-ಕುಂಕುಮ ಅರ್ಪಣೆ ಮಾಡಲಾಯಿತು.
ರಾಕ್ಷಸನನ್ನು ಸಂಹರಿಸಿದ ಚಾಮುಂಡೇಶ್ವರಿ ಶಾಂತರೂಪ ತಾಳಿದ್ದು ಬಿಂಡಿಗ ಬೆಟ್ಟದಲ್ಲೆ ಎನ್ನುವ ನಂಬಿಕೆ ಇದೆ. ರಾಜರ ಆಳ್ವಿಕೆಯ ಕಾಲದಲ್ಲಿಯೂ ಮೈಸೂರಿನಿಂದ ಬಾಗಿನದ ವಸ್ತುಗಳು ಬರುತ್ತಿದ್ದವು. ದೇವಿರಮ್ಮನ ಬೆಟ್ಟದ ತಪ್ಪಲಿನ ಕೆಳಭಾಗದಲ್ಲಿರುವ ದೇವಸ್ಥಾನಕ್ಕೆ ಗಾಳಿ ರೂಪದಲ್ಲಿ ದೇವಿರಮ್ಮ ಪ್ರವೇಶಿಸಿದ್ದಾಳೆ. ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ನೀಡುವ ದೇವಿರಮ್ಮ ಉಳಿದ 364 ದಿನ ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಎರಡು ದಿನಗಳಿಂದ ಬೆಟ್ಟದ ಮೇಲಿದ್ದ ದೇವಿ ಇಂದು ಕೆಳಗಿರುವ ದೇಗುಲದ ಗರ್ಭಗುಡಿಗೆ ಪ್ರವೇಶಿಸಿದ್ದಾಳೆ. ಈ ಬಾರಿ ಎರಡು ದಿನ ಬೆಟ್ಟ ಹತ್ತಲು ಅವಕಾಶ ನೀಡಲಾಗಿತ್ತು. ಎರಡು ದಿನಗಳಲ್ಲಿ ಸುಮಾರು 70 ಸಾವಿರಕ್ಕೂ ಹೆಚ್ಚು ಭಕ್ತರು ಬರೀಗಾಲಿನಲ್ಲಿ ಬೆಟ್ಟ ಏರಿ ತಾಯಿಯ ದರ್ಶನ ಪಡೆದಿದ್ದಾರೆ.



