- ಬೆಂಗಳೂರಿನಲ್ಲಿ ಗೃಹ ಸಚಿವ ಬೊಮ್ಮಾಯಿ ಹೇಳಿಕೆ
ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಮುಂಬರುವ ಮೂರರಿಂದ ನಾಲ್ಕು ದಿನದೊಳಗೆ ನೂತನ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಮಂಗಳವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಬೊಮ್ಮಾಯಿ, ನಮ್ಮದು ರಾಷ್ಟ್ರೀಯ ಪಕ್ಷವಾಗಿರುವುದರಿಂದ ಶಾಸಕಾಂಗ ಸಭೆ, ಕೇಂದ್ರದ ಕೋರ್ ಕಮೀಟಿ, ಪಾರ್ಲಿಮೆಂಟರಿ ಬೋರ್ಡ್ ಸೇರಿ ಸಮಾಲೋಚನೆ ನಡೆಸಿ ಸಿಎಂ ಆಯ್ಕೆ ಮಾಡಲಾಗುತ್ತದೆ.
ನಿಮ್ಮನ್ನೇ ಸಿಎಂ ಮಾಡಬೇಕು ಎಂದು ಯಡಿಯೂಪ್ಪ ಬೆಂಬಲಿತ ಶಾಸಕರು ತಮ್ಮ ಮನೆಗೆ ಆಗಮಿಸುತ್ತಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮಂತ್ರಿ ಆಗುವುದಕ್ಕಿಂತ ಮೊದಲೂ ಬರುತ್ತಿದ್ದರು. ಈಗಲೂ ಬರುತ್ತಿದ್ದಾರೆ. ಇದು ಹೊಸದೇನಲ್ಲ. ಅರುಣಕುಮಾರ್ ನಮ್ಮ ಜಿಲ್ಲೆಯ ಶಾಸಕ ಹಾಗಾಗಿ ನಾನು ಸಿಎಂ ಆಗಲೆಂದು ಹೇಳಿರಬಹುದು. ಆದರೆ ಅದು ಮುಖ್ಯ ಆಗುವುದಿಲ್ಲ. ಇಲ್ಲಿ ಪಕ್ಷದ ನಿರ್ಧಾರ ಮುಖ್ಯ ಎಂದು ಸ್ಪಷ್ಟಪಡಿಸಿದರು.
ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಬೊಮ್ಮಾಯಿ, ನಮ್ಮ ಪಕ್ಷದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ಯಾವುದೇ ನೈತಿಕತೆ ಇಲ್ಲ. ಅದು ಅವರ ಮನಸ್ಥಿತಿ ತೋರಿಸುತ್ತದೆ. ಇನ್ನು ಹೊಸ ಸಿಎಂ ಆಗದೇ ಇರುವ ಸಂದರ್ಭದಲ್ಲಿ ಜನರಲ್ಲಿ ಈ ರೀತಿ ಭಾವನೆ ಹುಟ್ಟಿಸುವ ಮನಸ್ಥಿತಿ ದೂರ್ತತನದಿಂದ ಕೂಡಿದೆ ಎಂದು ಕಿಡಿಕಾರಿದರು.
ಲಿಂಗಾಯತರಿಗೆ ಸಿಎಂ ಸ್ಥಾನ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇವೆಲ್ಲ ರಾಜಕೀಯ ವಿಶ್ಲೇಷಣೆಗಳು. ಹಲವಾರು ರೀತಿಯ ವಿಶ್ಲೇಷಣೆ ಮಾಡಲಾಗುತ್ತಿದೆ. ಒಂದು ರಾಜಕೀಯ ಸ್ಥಿತಿಗತಿಯನ್ನು ಬೇರೆ ಬೇರೆ ರೀತಿಯಲ್ಲಿ ಚರ್ಚೆ ಮಾಡುವುದು ಸಹಜ ಎಂದು ಹೇಳಿದರು.