ವಿಜಯಸಾಕ್ಷಿ ಸುದ್ದಿ, ಡಂಬಳ: ಗದಗ ನಗರಕ್ಕೆ ಮತ್ತು ಮುಂಡರಗಿ ಸೇರಿ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಚಳ್ಳಿಕೇರಿ ಮುಖ್ಯ ರಸ್ತೆಯುದ್ದಕ್ಕೂ ಮುಳ್ಳು ಕಂಟಿ ಬೆಳೆದು ಕೊಂಬೆಗಳು ರಸ್ತೆಗೆ ಚಾಚಿದ್ದು, ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸುತ್ತಿದೆ.
ಮುಂಡರಗಿ ತಾಲೂಕು ಕೇಂದ್ರದಿಲದ ಡಂಬಳ ಹೋಬಳಿಯ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪೈಕಿ ಬಹುತೇಕ ಕಡೆ ಎರಡೂ ಬದಿಗೆ ಮುಳ್ಳು ಕಂಟಿಗಳು ಎತ್ತರಕ್ಕೆ ಬೆಳೆದು ರಸ್ತೆಗೆ ಚಾಚಿವೆ. ಮುಂಡರಗಿ ನಗರದಿಂದ ಬರದೂರ, ಮೇವುಂಡಿ, ಡಂಬಳ, ಜಂತ್ಲಿ ಶಿರೂರ, ಚುರ್ಚಿಹಾಳ, ಡೋಣಿ ಕ್ರಾಸ್, ಕದಾಂಪುರ, ಪಾಪನಾಶಿ, ಅಡವಿಸೋಮಾಪುರ ಮಾರ್ಗವಾಗಿ ಗದಗ ನಗರಕ್ಕೆ ಸಂಪರ್ಕ ಕಲ್ಪಿಸುವ ಚಳ್ಳಿಕೇರಿ ಮುಖ್ಯ ರಸ್ತೆ ಹೋಗುವ ರಸ್ತೆಗಳ ಎರಡೂ ಬದಿಗೆ ಹುಲುಸಾಗಿ ಬೆಳೆದಿರುವ ಹುಲ್ಲು ಮತ್ತು ಮುಳ್ಳುಕಂಟಿಗಳಿಂದ ಪ್ರಯಾಣಿಕರು ತೊಂದರೆ ಎದುರಿಸುತ್ತಿದ್ದಾರೆ.
ಕೊರ್ಲಹಳ್ಳಿ ಭಾಗದಲ್ಲಿರುವ ಟೋಲ್ ಮತ್ತು ಕದಾಂಪುರ ಮತ್ತು ಪಾಪನಾಶಿ ಗ್ರಾಮದ ಮಧ್ಯೆ ಇರುವ ಟೋಲ್ಗಳ ಮಧ್ಯೆ 60 ಕಿಮಿ ಅಂತರವಿದೆ. ಆದರೆ ಈ ಭಾಗದಲ್ಲಿ ಸಂಚರಿಸುವ ವಿವಿಧ ವಾಹನಗಳು ಎರಡೂ ಕಡೆಗಳಲ್ಲಿ ಟೋಲ್ ಕಟ್ಟುತ್ತಿದ್ದಾರೆ. ಆದರೆ, ಎರಡು ವರ್ಷಗಳಿಂದ ಟೋಲ್ ನಿರ್ವಹಿಸುವವರು ಶುಲ್ಕ ಪಡೆದರೂ ರಸ್ತೆ ಸುರಕ್ಷತೆ ಕುರಿತು ವಿಚಾರ ಮಾಡುತ್ತಿಲ್ಲ. ಕೆಆರ್ಡಿಎಲ್ ಇಲಾಖೆಯೂ ಸಂಪೂರ್ಣ ಕಣ್ಣುಮುಚ್ಚಿಕೊಂಡು ಕುಳಿತಿರುವುದಕ್ಕೆ ಮುಳ್ಳು ಕಂಟಿಗಳೇ ಸಾಕ್ಷಿ ಹೇಳುತ್ತಿವೆ.
ಪ್ರಯಾಣಿಕರ ಸುರಕ್ಷತೆಗೆ, ಮೂಲ ಸೌಕರ್ಯಗಳಿಗೆ ಇಲ್ಲಿ ಕೇಳುವವರೇ ಇಲ್ಲದಂತಾಗಿದ್ದು, ಪುರಷರ ಶೌಚಾಲಯ ಗಬ್ಬೆದ್ದು ನಾರುವಂತಿದ್ದರೆ, ಮಹಿಳಾ ಶೌಚಾಲಯವೇ ಇಲ್ಲ. ಟೋಲ್ನಲ್ಲಿ ಅಳವಡಿಸಿರುವ ಕಬ್ಬಿಣದ ತಡೆಗೋಡೆಗಳು ಸಂಪೂರ್ಣ ತುಕ್ಕು ಹಿಡಿದು ಪ್ರಯಾಣಿಕರ ಜೀವ ತೆಗೆಯುವಂತಿವೆ.
ಡಂಬಳ ಮಾರ್ಗದಿಂದ ಗದಗ ನಗರಕ್ಕೆ ತೆರಳುವ ಮುಖ್ಯ ರಸ್ತೆಯುದ್ದಕ್ಕೂ ಸುರಕ್ಷತಾ ಫಲಕಗಳು ಹಾಳಾಗಿದ್ದು, ಅಪಘಾತ ವಲಯದ ಸೂಚನಾ ಫಲಕ, ಮಾರ್ಗಸೂಚಿ ಫಲಕಗಳನ್ನು ಹಾಕದೆ ಇರುವುದರಿಂದ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಡಂಬಳ ಗ್ರಾಮದಿಂದ ತೆರಳುವಾಗ ಡೋಣಿ ಕ್ರಾಸ್ ಬಳಿ ಅಳವಡಿಸಿರುವ ಲೋಹದ ತಡೆಗೋಡೆ ಸಂಪೂರ್ಣ ಹಾಳಾಗಿ ಸವಾರರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.
ಈ ಕುರಿತು ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು, ವಿವಿಧ ಸಂಘಟನೆಗಳು ಎಚ್ಚರಿಸಿವೆ.
“ರಸ್ತೆಯುದ್ದಕ್ಕೂ ಮುಳ್ಳು ಕಂಟಿ ಬೆಳೆದು ಚಾಚಿರುವ ಕಾರಣ ತಿರುವು ರಸ್ತೆಯಲ್ಲಿ ಎದುರಿನಿಂದ ಬರುವ ವಾಹನಗಳು ಕಾಣುತ್ತಿಲ್ಲ. ಇದರಿಂದ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯುದ್ದಕ್ಕೂ ಹಲವು ಅಪಘಾತ ವಲಯಗಳಿದ್ದು, ಜೀವವನ್ನು ಅಂಗೈಯಲ್ಲಿ ಹಿಡಿದೇ ವಾಹನ ಚಾಲನೆ ಮಾಡುವಂತಾಗಿದೆ”
ಎಸ್. ಹನುಮಂತಪ್ಪ.
ಚಾಲಕ, ಹೂವಿನಹಡಗಲಿ.



