ವಿಜಯಸಾಕ್ಷಿ ಸುದ್ದಿ, ಗದಗ: ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಅವರನ್ನು ಜಿಲ್ಲೆಯಿಂದ ಬೇರೆ ವಿಭಾಗಕ್ಕೆ ವರ್ಗಾಯಿಸಿ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ವಿವಿಧ ಹಿಂದೂ ಸಂಘಟನೆಗಳ ನೂರಾರು ಕಾರ್ಯಕರ್ತರು ಗದುಗಿನಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಮಕೃಷ್ಣ ಸೇವಾ ಸಮಿತಿ ಅಧ್ಯಕ್ಷ ರಾಜೂ ಖಾನಪ್ಪನವರ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿದೆ. ಸರಕಾರ ಹಿಂದೂಗಳ ಮೇಲೆ ವಿವಿಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಹಿಂದುಗಳನ್ನು ಸದೆಬಡಿಯಲು ಪ್ರಯತ್ನಿಸುತ್ತಿದೆ. ಜಿಲ್ಲೆಯಾದ್ಯಂತ ಮುಗ್ಧ ಹಿಂದೂಗಳು ಸರಕಾರಿ ಅಧಿಕಾರಿಗಳ ದೌರ್ಜನ್ಯದಿಂದ ನಲುಗಿದ್ದಾರೆಂದು ಆರೋಪಿಸಿದರು.
ನ.10ರಂದು ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಸುಮ್ಮನೆ ಮನೆಯಲ್ಲಿದ್ದ ದೇವಿಹಾಳ ತಾಂಡಾದ ಸೋಮಪ್ಪ ಲಮಾಣಿ ಎಂಬ ವ್ಯಕ್ತಿಯ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಮನಸೋಇಚ್ಚೆ ಥಳಿಸಿದ್ದಾರೆ. ಈ ಅಧಿಕಾರಿಯ ಥಳಿತದಿಂದ ಸೋಮಪ್ಪ ಲಮಾಣಿಯ ಮರ್ಮಾಂಗಕ್ಕೆ ತೀವ್ರವಾಗಿ ಗಾಯವಾಗಿದೆ. ಪಿಎಸ್ಐ ಈರಣ್ಣ ರಿತ್ತಿ ಜಾತಿ ನಿಂದನೆ ಮಾಡಿ ಸಮಸ್ತ ಲಂಬಾಣಿ ಜನಾಂಗವನ್ನು ಅವಮಾನಿಸಿದ್ದಾರೆಂದು ಆರೋಪಿಸಿದರು.
ಕಳೆದ ವರ್ಷದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಇದೇ ಅಧಿಕಾರಿ ಲಕ್ಷ್ಮೀಶ್ವರದಲ್ಲಿ ಶಾಂತಿಯುತವಾಗಿ ದುರ್ಗಾ ಮೂರ್ತಿಯನ್ನು ವಿಸರ್ಜನೆ ಮಾಡಿ ಮನೆಗೆ ವಾಪಸ್ಸಾಗುತ್ತಿದ್ದ ಮುಗ್ಧ ಗೋಸಾವಿ ಜನಾಂಗದವರ ಮೇಲೆ ಲಾಠಿ ಚಾರ್ಜ್ ನಡೆಸಿ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದಾಗ ಅಂದಿನ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಗಳು ಬೆಳಗಾವಿಗೆ ವರ್ಗಾಯಿಸಿದ್ದರು. ಈ ಹಿಂದೆಯೂ ಸಹ ಶಿರಹಟ್ಟಿಯಲ್ಲಿ ಅನೇಕ ವರ್ಷಗಳ ಕಾಲ ಕಾರ್ಯನಿರ್ವಹಿಸಿ ಜನವಿರೋಧಿ, ಹಿಂದೂ ವಿರೋಧಿ ನೀತಿಯನ್ನೇ ಅನುಸರಿಸಿದ್ದಾರೆ. ಈ ಅಧಿಕಾರಿಗೆ ಶಿರಹಟ್ಟಿ ಹೊರತುಪಡಿಸಿ ಬೇರೆ ಕಡೆಗೆ ನೌಕರಿ ನಡೆಯುವದಿಲ್ಲವೇ, ಪದೇ ಪದೇ ಶಿರಹಟ್ಟಿ ತಾಲೂಕಿಗೆ ಆಗಮಿಸಿ ಅಲ್ಲಿನ ಮುಗ್ಧ ಹಿಂದೂಗಳ ಮೇಲೆ ಕ್ರೌರ್ಯ ನಡೆಸಿ ಯಾರನ್ನು ಸಂತುಷ್ಟಗೊಳಿಸಲು ಹೊರಟಿದ್ದಾರೆಂಬ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಮುಗ್ಧ ಲಂಬಾಣಿ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಜನವಿರೋಧಿ, ಹಿಂದೂ ವಿರೋಧಿ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಅವರನ್ನು ಜಿಲ್ಲೆಯಿಂದ ವರ್ಗಾಯಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಬೇಕು. ಏಳು ದಿನದೊಳಗಾಗಿ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಮೇಲೆ ಯಾವುದೇ ಕ್ರಮ ಜರುಗಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ನಡೆಸುವದಾಗಿ ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಈಶ್ವರ ಕಾಟವಾ, ಸಂತೋಷ ಕುರಿ, ಶಿವಯೋಗಿ ಹಿರೇಮಠ, ಕುಮಾರ ನಡಗೇರಿ, ವೆಂಕಟೇಶ ದೊಡ್ಡಮನಿ, ಅಶೋಕ ಭಜಂತ್ರಿ, ಮಹೇಶ ಹೊಸೂರ, ಸಂಜೀವ ಚೆಟ್ಟಿ, ಸತೀಶ ಕುಂಬಾರ, ಕಿರಣ ಹಿರೇಮಠ, ಈರಣ್ಣ ಪೂಜಾರ, ಭರತ್ ಲದ್ದಿ, ಲಕ್ಷ್ಮೀಶ್ವರದ ಗೋಸಾವಿ ಸಮಾಜದ ಬಾಳಪ್ಪ ಗೋಸಾವಿ, ಹರೀಶ ಗೋಸಾವಿ ಮುಂತಾದವರಿದ್ದರು.
ಸರಕಾರಿ ಅಧಿಕಾರಿಗಳು ಸಮಾಜದ ಸೇವಕರಾಗಿದ್ದಾರೆ. ಸರಕಾರಿ ಅಧಿಕಾರಿಗಳಿಗೆ ಸಾರ್ವಜನಿಕರು ನೀಡುವ ತೆರಿಗೆಯಿಂದಲೇ ಸಂಬಳ, ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿಯೂ ಸಹ ಶಿರಹಟ್ಟಿ ಪಿಎಸ್ಐ ಈರಣ್ಣ ರಿತ್ತಿ ಕಂಡ ಕಂಡವರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿ ಜಾತಿ ನಿಂದನೆ ಮಾಡಲು ಇವರಿಗೆ ಯಾರು ಅಧಿಕಾರ ನೀಡಿದ್ದಾರೆ, ಇವರ ಹಿಂದೆ ನಿಂತು ಹಿಂದೂಗಳನ್ನು ಮಟ್ಟಹಾಕಲು ಹವಣಿಸುತ್ತಿರುವವರು ಯಾರು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ರಾಜೂ ಖಾನಪ್ಪನವರ ಆಗ್ರಹಿಸಿದರು.


