ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಸರಕಾರ, ಸಮುದಾಯ, ಶಾಲಾಡಳಿತ, ಪಾಲಕರು, ಶಿಕ್ಷಕರು ಸಮನ್ವಯ ಸಾಧಿಸಿ ಸಮರ್ಪಣಾ ಭಾವದಿಂದ ಶ್ರಮಿಸಬೇಕು. ಆ ಕಾರಣಕ್ಕಾಗಿಯೇ ಸರ್ಕಾರ ರಾಜ್ಯದಾದ್ಯಂತ ಮಕ್ಕಳ ದಿನಾಚರಣೆಯ ಈ ದಿನದಂದು ವಿಶೇಷವಾಗಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಸಂಘಟಿಸಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಅಭಿಪ್ರಾಯಪಟ್ಟರು.
ಅವರು ಸರಕಾರಿ ಪ್ರೌಢಶಾಲೆ ಹುಲ್ಲೂರಿನಲ್ಲಿ ಶುಕ್ರವಾರ ನಡೆದ ಲಕ್ಷ್ಮೇಶ್ವರ ತಾಲೂಕಾ ಮಟ್ಟದ ಪೋಷಕ-ಶಿಕ್ಷಕರ ಮಹಾಸಭೆಯ ಸಾಂಕೇತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ ಮಾತನಾಡಿ, ಪೋಷಕ-ಶಿಕ್ಷಕರ ಇಂದಿನ ಮಹಾಸಭೆಯಲ್ಲಿ ಸಂವಿಧಾನ ಪೀಠಿಕೆಯ ಓದು, ಪೋಷಕರಿಗೆ ಮಕ್ಕಳ ಕಲಿಕಾ ಪ್ರಗತಿ ಹಾಗೂ ಹಾಜರಾತಿ ಮಾಹಿತಿ, ಕಲಿಕಾ ಉಪಕ್ರಮಗಳು, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ, ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ, ಪೋಷಕರಿಗೆ ಆರ್ಟಿಇ ಕಾಯ್ದೆ, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ನೀತಿ, ಪೋಕ್ಸೋ ಕಾಯ್ದೆ, ಬಾಲ್ಯವಿವಾಹ ನಿಷೇಧ, ಬಾಲಕಾರ್ಮಿಕ ನಿಷೇಧ ಮುಂತಾದ ವಿಚಾರಗಳ ಬಗ್ಗೆ ಪಾಲ್ಗೊಂಡ ಎಲ್ಲಾ ಪೋಷಕರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಆರಂಭದಲ್ಲಿ ತಾಲೂಕಾಡಳಿತದ ಪರವಾಗಿ ತಾ.ಪಂ ಇಓ ಕೃಷ್ಣಪ್ಪ ಧರ್ಮರ, ಹುಲ್ಲೂರು ಗ್ರಾಮ ಪಂಚಾಯಿತಿಯ ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು, ಊರಿನ ಪಾಲಕರು-ಪೋಷಕರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಎಲ್ಲರೂ ಸಾಲಾಗಿ ನಿಂತು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದ್ದು ವಿಶೇಷವಾಗಿತ್ತು. ಸಭೆಯಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ ಶಾಲಾ ತಂಡ, ಕ್ರೀಡಾಕೂಟಗಳಲ್ಲಿ ಸ್ಥಾನ ಪಡೆದ ವಿದ್ಯಾರ್ಥಿಗಳು ಹಾಗೂ ಉತ್ತಮ ಪರಿಸರ ಶಾಲೆ ಪ್ರಶಸ್ತಿ ಪಡೆದ ಕಾರಣಕ್ಕಾಗಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಗೌರವಿಸಲಾಯಿತು.
ಹುಲ್ಲೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮಹಬೂಬಅಲಿ ಗಾಡಗೋಳಿ, ಗ್ರಾಮದ ಹಿರಿಯರಾದ ನಾಗಪ್ಪ ಮೂಕಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಶಂಕ್ರಣ್ಣ ಮಾಗಡಿ, ಉಪಾಧ್ಯಕ್ಷೆ ರಜಿಯಾ ಬೇಗಂ ನದಾಫ್, ಶಾಲೆಯ ಶಿಕ್ಷಕ ಬಿ.ಎಸ್. ಕೊಪ್ಪದ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವೀಣಾ ಅಕ್ಕಿ, ಗ್ರಾಮದ ಹಿರಿಯರಾದ ಸಿದ್ದಯ್ಯ ಅಮೋಘಿಮಠ, ಶೇಖಣ್ಣ ಸಾಸಲವಾಡ, ವಿರೂಪಾಕ್ಷಪ್ಪ ಮೂಕಿ, ಉಮೇಶ ರಗಟಿ, ಚೆನ್ನಪ್ಪಗೌಡ ಪಾಟೀಲ, ಮಂಜುನಾಥ ರಗಟಿ, ಶಂಕ್ರಪ್ಪ ಮೂಕಿ, ನಿಂಗಪ್ಪ ಹೊಸೂರ, ಭರಮಜ್ಜ ಹಳ್ಳಿಗೊರವರ, ಕಬೀರ ನದಾಫ್, ಬಸಣ್ಣ ಮಾಗಡಿ, ಲಕ್ಷ್ಮಣ ಅತ್ತಿಗೇರಿ, ನೀಲಪ್ಪ ಹಳ್ಳಿಗೊರವರ ಮುಂತಾದವರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಕೆ.ವೈ. ಮೇಲಿನಮನಿ ಮಾತನಾಡಿ, ಹುಲ್ಲೂರಿನ ಗ್ರಾಮ ಪಂಚಾಯಿತಿ, ಎಸ್.ಡಿ.ಎಂ.ಸಿ ಹಾಗೂ ಪಾಲಕರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಪೋಷಕ-ಶಿಕ್ಷಕರ ಮಹಾಸಭೆ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಗ್ರಾಮದ ಮಕ್ಕಳ ಶಿಕ್ಷಣದ ಪ್ರಗತಿಗೆ ಇಲ್ಲಿನ ಸಮುದಾಯದ ಸಮರ್ಥ ಸಹಭಾಗಿತ್ವ ಮಾದರಿಯಾಗಿದೆ ಎಂದರು.


