ಸುಮಲತಾ ಹೇಳಿಕೆಗೆ ಸಂಸದ ಪ್ರತಾಪಸಿಂಹ ತಿರುಗೇಟು
ವಿಜಯಸಾಕ್ಷಿ ಸುದ್ದಿ, ಮೈಸೂರು
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ ಎಂಬ ಸಮಲತಾ ಅಂಬರೀಶ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರಿಗೆ ಅನುಮಾನ ಇದೆಯೋ ಅಂತಹವರು ತಜ್ಞರನ್ನು ಕರೆದುಕೊಂಡು ಬಂದು ಪರಿಶೀಲನೆ ಮಾಡಿಸಿಕೊಳ್ಳಲಿ ಎಂದರು.
ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಮೂರು ಸಂಸದರಿಗೆ ಸೇರುತ್ತದೆ ಎಂಬ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್, ದಶಪಥ ಹೆದ್ದಾರಿ ಯೋಜನೆ ತಂದಿರುವುದು ಮೈಸೂರಿಗೋಸ್ಕರ ಮಾತ್ರ.
ಮೈಸೂರು ಡೆಸ್ಟಿನೇಷನ್ ಎಂಬ ಕಾರಣಕ್ಕಾಗಿ ನಾನು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಮಂಡ್ಯದ ಮೇಲೆ ಹೋಗುತ್ತೆ ಎಂದು ಮಂಡ್ಯದವರು, ರಾಮನಗರದ ಮೇಲೆ ಹೋಗುತ್ತೆ ಎಂದು ರಾಮನಗರದವರು ಹೇಳಿಕೊಳ್ಳುತ್ತಿದ್ದಾರೆ ಎಂದು ಸುಮಲತಾ, ಡಿಕೆಶಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು.
ಈ ಕಾಮಗಾರಿ ನನ್ನದು ಎಂದು ಹೇಳಿಕೊಂಡರೇ ಅದಕ್ಕೆ ಅರ್ಥ ಇದೆಯಾ?. ಇದು ಮೋದಿ ಸರ್ಕಾರದ ಯೋಜನೆ.
ಯಾರ್ಯಾರೋ ಇದನ್ನು ತಮ್ಮ ಯೋಜನೆ ಎನ್ನುವ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮಂಡ್ಯ, ರಾಮನಗರದ ಮೂಲಕ ಹಾದು ಬಂದರೂ ಭೂ ಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳ ಕರ್ತವ್ಯ. ಪರೋಕ್ಷವಾಗಿ ಡಿ.ಕೆ.ಸುರೇಶ್, ಸುಮಲತಾ ಪಾತ್ರವಿಲ್ಲ ಎಂದ ಪ್ರತಾಪ್ಸಿಂಹ, ಈ ಯೋಜನೆಗೆ ಕಾಂಗ್ರೆಸ್ ನವರಿಂದ ಬಿಡಿಗಾಸು ಕೂಡ ಸಿಕ್ಕಿಲ್ಲ. ಸಿದ್ದರಾಮಯ್ಯ ಅವರ ಹೇಳಿಕೆಗೆ ಅರ್ಥವಿಲ್ಲ.
ಪದೇ ಪದೆ ಜನರಿಂದ ತಿರಸ್ಕೃತರಾದವರ ಮಾತಿಗೆ ಅರ್ಥವಿಲ್ಲ ಎಂದು ಪ್ರತಾಪ ಸಿಂಹ ತಿರುಗೇಟು ನೀಡಿದರು.
ಸುಮಲತಾ ಅವರು ಈ ಯೋಜನೆಯ ಕಾಮಗಾರಿ ನನ್ನ ರಸ್ತೆ ಮೇಲೆ ಹೋಗುತ್ತದೆ ಎಂದರೆ ಏನು ಮಾಡಕ್ಕಾಗಲ್ಲ. ಅವರಿಗೆ ಅವಶ್ಯಕತೆ ಇದ್ದರೆ ಮಂಡ್ಯದವರಗೆ, ರಾಮನಗರದವರು ರಾಮನಗರದವರೆಗೂ ಕಾಮಗಾರಿ ತರಲಿ ಎಂದು ಸವಾಲು ಹಾಕಿದರು.
ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಯಿತು ಎಂಬುದು ಈಗ ಅರ್ಥವಾಗಬೇಕು. ಮೋದಿಯವರು ಪರಿಸ್ಥಿತಿಯನ್ನು ಮೊದಲೇ ಅರ್ಥ ಮಾಡಿಕೊಂಡು ಸಿಎಎ ಕಾಯ್ದೆಯನ್ನು ಜಾರಿಗೊಳಿಸಿದರು. ಪ್ರತಿಯೊಬ್ಬ ಭಾರತೀಯರು ಇದನ್ನು ಅರ್ಥ ಮಾಡಿಕಳ್ಳಬೇಕು ಎಂದರು.
ಇವತ್ತು ಆಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದರೂ ಅವರನ್ನು ಕರೆಸಿಕೊಳ್ಳುತ್ತಿಲ್ಲ. ಷರಿಯಾ, ತಾಲಿಬಾನ್ ಮಾನವ ವಿರೋಧಿಯೆಂಬುದು ಇದೀಗ ಸಾಬೀತಾಗಿದೆ.
ಕೇವಲ ಆಫ್ಘಾನಿಸ್ತಾನದಲ್ಲಿ ಮಾತ್ರ ಇಂತಹ ಮನಸ್ಥಿತಿಯ ಜನರಿಲ್ಲ, ಭಾರತದಲ್ಲೂ ಅದೇ ಮನಸ್ಥಿತಿಯ ಜನರಿದ್ದಾರೆ. ಸಿಎಎ ಜಾರಿಗೆ ತಂದದ್ದು ಆಫ್ಘಾನಿಸ್ತಾನದ ಕಾರಣಕ್ಕಾಗಿ ಮಾತ್ರ ಅಲ್ಲ. ಇತರ ಕಡೆಗಳಲ್ಲಿ ಈ ರೀತಿಯ ಅನಾಹುತಗಳಾಗಬಹುದು. ಎಲ್ಲರೂ ಸೇರಿ ಪಕ್ಷಾತೀತವಾಗಿ ಎದುರಿಸಬೇಕಾದ ಪರಿಸ್ಥಿತಿ ಬರಲಿದೆ.
ಆಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆ ಮುಸ್ಲಿಂ ರಾಷ್ರಗಳಿಗೂ ಅಪಾಯಕಾರಿಯಾಗಿ ಪರಿಣಮಿಸಬಹುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.