HomeKarnataka Newsಗ್ಯಾರಂಟಿ ಕುರಿತ ಮೋದಿಯವರ ಟೀಕೆಗಳನ್ನು ಸುಳ್ಳು ಮಾಡಿದ್ದೇವೆ; ಅವರು ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ -...

ಗ್ಯಾರಂಟಿ ಕುರಿತ ಮೋದಿಯವರ ಟೀಕೆಗಳನ್ನು ಸುಳ್ಳು ಮಾಡಿದ್ದೇವೆ; ಅವರು ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ – ಡಿಕೆ ಶಿವಕುಮಾರ್

For Dai;y Updates Join Our whatsapp Group

Spread the love

ಬೆಂಗಳೂರು: “ಅಂಗನವಾಡಿ ಕಾರ್ಯಕರ್ತೆಯರು ಸಮಾಜದ ಪೋಷಕರು, ಎರಡನೇ ತಾಯಿಯಾಗಿ ಜವಾಬ್ದಾರಿ ಹೊತ್ತು ಮಕ್ಕಳನ್ನು ಸಲಹಿ ದೇಶದ ಭವಿಷ್ಯ ರೂಪಿಸುವವರು. ಅಕ್ಷರಭ್ಯಾಸ ಮಾಡಿಸುವ ಸರಸ್ವತಿಯ ಸನ್ನಿಧಿ ಅಂಗನವಾಡಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಅಂಗನವಾಡಿ ಕಾರ್ಯಕರ್ತೆಯರ ಕೆಲಸವನ್ನು ಬಣ್ಣಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶುಕ್ರವಾರ ನಡೆದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು ಹಾಗೂ ಅಂಗನವಾಡಿ ಕೇಂದ್ರಗಳ ಸ್ಥಾಪನೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿದರು.

“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅಂಗನವಾಡಿ ಕಾರ್ಯಕರ್ತೆಯರು ನಿಮ್ಮ ಸ್ವಂತ ಮಕ್ಕಳಿಗೂ ಸಮಯ ನೀಡದೆ, ಕೊಟ್ಟ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುವ ತ್ಯಾಗಮೂರ್ತಿಗಳು ನೀವು” ಎಂದರು.

ಹೆಣ್ಣು ಕುಟುಂಬ ಹಾಗೂ ಸಮಾಜದ ಶಕ್ತಿ

“ಜನನ ನೀಡುವವಳು ತಾಯಿ, ಜೋಪಾನ ಮಾಡುವವಳು ಅಕ್ಕ, ಅಕ್ಷರ ಕಲಿಸಿದಾಕೆ ಶಿಕ್ಷಕಿ, ಜೊತೆಯಾಗಿ ನಿಲ್ಲುವವಳು ಹೆಂಡತಿ, ಮುಪ್ಪಿನಲ್ಲಿ ಆರೈಕೆ ಮಾಡುವವಳು ಮಗಳು, ಸತ್ತಾಗ ಜಾಗ ಕೊಡುವವಳು ಭೂಮಿ ತಾಯಿ. ಮನೆಯನ್ನು ಬೆಳಗುವವಳು ಹೆಣ್ಣು. ನೀವೆ ಕುಟುಂಬ ಹಾಗೂ ಸಮಾಜದ ಶಕ್ತಿ” ಎಂದು ಶ್ಲಾಘಿಸಿದರು.

“ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಗ್ರಾಮದ ಮಹಿಳೆಯರ ಆರೋಗ್ಯ ಕಾಪಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ನಿಮ್ಮ ತ್ಯಾಗ, ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಇಂದಿರಾಗಾಂಧಿ ಅವರು ಐವತ್ತು ವರ್ಷಗಳ ಹಿಂದೆ ತಂದಂತಹ ಕನಸಿನ ಯೋಜನೆಯ ಯಶಸ್ಸಿಗೆ ದುಡಿಯುತ್ತಿರುವ ಅಂಗನವಾಡಿ ತಾಯಂದಿರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರು ಕಡಿಮೆಯೇ” ಎಂದು ಹೇಳಿದರು.

ಸ್ತ್ರೀ ಶಕ್ತಿ ಸಂಘಗಳಿಂದ ಆರ್ಥಿಕ ಸಬಲತೆ

ಮನಮೋಹನ್‌ ಸಿಂಗ್‌ ಅವರ ಕಾಲದಲ್ಲಿ ಆಶಾ ಯೋಜನೆ, ಎಸ್‌.ಎಂ.ಕೃಷ್ಣ ಅವರ ಕಾಲದಲ್ಲಿ ಸ್ತ್ರೀ ಶಕ್ತಿ ಸಂಘ ಯೋಜನೆ ತರಲಾಯಿತು. ನಾನು ಸಹಕಾರ ಸಚಿವನಾಗಿದ್ದಾಗ ಬೀದರ್‌ ಗೆ ತೆರಳಿದ್ದ ವೇಳೆ ಮಹಿಳಾ ಸಂಘಟನೆ ಕೆಲಸಗಳನ್ನು ಗಮನಿಸಿ ಇದಕ್ಕೆ ಒಂದು ಸ್ವರೂಪ ನೀಡಬೇಕು ಎಂದು ಎಸ್.ಎಂ.ಕೃಷ್ಣ ಅವರ ಬಳಿ ಚರ್ಚೆ ನಡೆಸಿದೆ. ತದ ನಂತರ ಕ್ಯಾಬಿನೆಟ್‌ ಮುಂದೆ ಚರ್ಚಿಸಿ ಸಚಿವರಾಗಿದ್ದ ಮೋಟಮ್ಮ ಅವರಿಗೆ ಇದರ ಜವಾಬ್ದಾರಿ ನೀಡಲಾಯಿತು” ಎಂದರು.

“ಇಂದು ಸ್ತ್ರೀ ಶಕ್ತಿ ಸಂಘಗಳು ಸಮಾಜದ ಶಕ್ತಿಗಳಾಗಿ ಬೆಳೆದಿವೆ. ಇದರಿಂದ ಆರ್ಥಿಕವಾದ ಶಕ್ತಿ ಲಭಿಸಿದೆ. ತಮ್ಮ ಕುಟುಂಬಗಳನ್ನು ಸಲಹುತ್ತಿದ್ದಾರೆ. ಇಂತಹ ಶಕ್ತಿಯನ್ನು ಕಾಂಗ್ರೆಸ್‌ ಮಹಿಳೆಯರಿಗೆ ನೀಡಿದೆ. ಇಂತಹ ಯಶಸ್ವಿ ಕಾರ್ಯಕ್ರಮ ಇಡೀ ದೇಶದಲ್ಲಿ ಯಾರು ಮಾಡಿಲ್ಲ” ಎಂದರು.

“ವರದಕ್ಷಿಣೆ ನಿಷೇಧ, ಬಾಲ್ಯವಿವಾಹ ತಡೆ ಕಾಯ್ದೆ, ಈಗ ಅಕ್ಕ ಪಡೆ ಯೋಜನೆ ನೀಡಿದ್ದೇವೆ. ಮಹಿಳಾ ಪರವಾಗಿ ಆಲೋಚಿಸದ ವಿಪಕ್ಷಗಳನ್ನು ನಾನು ಟೀಕೆ ಮಾಡುವುದಿಲ್ಲ. ನಂಬಿಕೆಗಿಂತ ದೊಡ್ಡ ದೇವರಿಲ್ಲ ಎಂದು ಸರ್ವಜ್ಞ ತನ್ನ ತ್ರಿಪದಿಯಲ್ಲಿ ಹೇಳುತ್ತಾನೆ. ಅದೇ ರೀತಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ವೇಳೆಯಲ್ಲಿ ನಮ್ಮ ತಾಯಂದಿರ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟುಕೊಂಡು ಅನೇಕ ಮಹಿಳಾಪರವಾದ ಯೋಜನೆಗಳನ್ನು ಜಾರಿಗೆ ತಂದಿದೆ” ಎಂದರು.

“ದೇವರು ವರ, ಶಾಪ ನೀಡುವುದಿಲ್ಲ. ಬದಲಾಗಿ ಅವಕಾಶ ನೀಡುತ್ತಾನೆ. ತಮಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಜನಪರ ಕೆಲಸ ಮಾಡುತ್ತಿರುವ ಲಕ್ಷ್ಮಿ ಹೆಬ್ಬಾಳಕರ ಅವರು ಪ್ರಾರಂಭಿಸಿರುವ ಅಕ್ಕ ಪಡೆ ಹಾಗೂ ಗೃಹಲಕ್ಷ್ಮಿ ವಿವಿದ್ದೋದ್ದೇಶ ಸಹಕಾರ ಸಂಘ ಇತಿಹಾಸದಲ್ಲಿ ಮಾದರಿಯಾಗಿ ಉಳಿಯಲಿದೆ” ಎಂದರು.

ಮೋದಿಯವರ ಟೀಕೆಗಳನ್ನು ಸುಳ್ಳು ಮಾಡಿದ್ದೇವೆ; ಅವರು ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ

“ಗ್ಯಾರಂಟಿ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿಯವರು ಟೀಕೆ ಮಾಡಿದರು. ಇಂದು 1.26 ಕೋಟಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ. ಈಗ ಬಿಜೆಪಿಯವರು ಬೇರೆ, ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳನ್ನು ನಕಲು ಮಾಡಿದ್ದಾರೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಲ್ಲಿ ಮೂರು ಯೋಜನೆಗಳು ನೇರವಾಗಿ ಮಹಿಳೆಯರ ಬಲವನ್ನು ಹೆಚ್ಚಿಸಿದೆ. ಹೆಣ್ಣು ಕುಟುಂಬದ ಕಣ್ಣು ಎನ್ನುವ ಮಾತಿನ ಮೇಲೆ ನಂಬಿಕೆಯಿಟ್ಟು ಕೆಲಸ ಮಾಡುತ್ತಿದ್ದೇವೆ” ಎಂದರು.

“ರಾಜ್ಯದಲ್ಲಿ ಮತ್ತೊಮ್ಮೆ ನಿಮ್ಮ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿ ಕೊಡಬೇಕು. ಎಲ್ಲಾ ತಾಯಂದಿರ ಆಶೀರ್ವಾದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೇಲಿರಲಿ. ಪ್ರತಿಯೊಬ್ಬರ ಮನೆಯ ದೀಪ ಬೆಳಗುವ ಕಾರ್ಯಕ್ರಮ ಕಾಂಗ್ರೆಸ್‌ ಸರ್ಕಾರ ಮಾಡಿದೆ, ಮಾಡಲಿದೆ” ಎಂದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!