ಬೆಂಗಳೂರು:- ಸಿಎಂ ಕುರ್ಚಿ ಪೈಪೋಟಿಯಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುರ್ಚಿಗೆ ದಿನೇದಿನೇ ಪೈಪೋಟಿ ಜಾಸ್ತಿ ಆಗುತ್ತಿದೆ. ನನಗಿರುವ ಮಾಹಿತಿ ಪ್ರಕಾರ ಆಡಳಿತ ಪಕ್ಷದಲ್ಲಿ ಏಳೆಂಟು ಜನ ಹಿರಿಯ ಶಾಸಕರು, ಸಚಿವರು ಹೇಗಾದರೂ ಮುಖ್ಯಮಂತ್ರಿ ಆಗಬೇಕೆಂದು ಪೈಪೋಟಿಗೆ ಇಳಿದಿದ್ದಾರೆ ಎಂದು ತಿಳಿಸಿದರು.
ಈ ಪೈಪೋಟಿಯಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಸಿದ್ದರಾಮಯ್ಯರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಬಗ್ಗೆ ಅಸಡ್ಡೆ ತೋರುತ್ತಾ ಬಂದಿದೆ. ಕಿಸಾನ್ ಸಮ್ಮಾನ್ ಯೋಜನೆಯನ್ನು ಪ್ರಧಾನಿಯವರು ಜಾರಿಗೊಳಿಸಿದ್ದರು. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ 4 ಸಾವಿರ ರೂ. ಹೆಚ್ಚುವರಿಯಾಗಿ ನೀಡಿತ್ತು. ಅದಕ್ಕೆ ಕಲ್ಲುಹಾಕಿದ್ದಾರೆ ಎಂದು ಆಕ್ಷೇಪಿಸಿದರು. ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿ ಜಾರಿಗೊಳಿಸಿದ್ದರು. ಅದಕ್ಕೂ ಇವರು ಕಲ್ಲು ಹಾಕಿದರು ಎಂದು ಆರೋಪಿಸಿದರು.


