ವಿಜಯಸಾಕ್ಷಿ ಸುದ್ದಿ, ಗದಗ: ಹುಟ್ಟಿನಿಂದ ಸಾವಿನವರೆಗೂ ಕಾನೂನು ಬೇಕೇ ಬೇಕು. ಜನನದ ದಾಖಲೆಗೂ, ಮರಣದ ದಾಖಲೆಗೂ ಕಾನೂನು ತುಂಬಾ ಅವಶ್ಯಕ. ಧರ್ಮದ ತಳಹದಿಯ ಮೇಲೆ ಕಾನೂನು ನಿಂತಿದ್ದು, ಕಾನೂನು ಬಿಟ್ಟು ಧರ್ಮ-ಸಂಸ್ಕಾರಗಳು ಇಲ್ಲ ಎಂದು ಜಿಲ್ಲಾ ವಿಶ್ರಾಂತ ನ್ಯಾಯಾಧೀಶರು, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರೂ ಆದ ಎಸ್.ಜಿ. ಪಲ್ಲೇದ ಹೇಳಿದರು.
ಇಲ್ಲಿನ ಶ್ರೀ ಅಡವಿಂದ್ರಸ್ವಾಮಿ ಮಠದಲ್ಲಿ ಜರುಗಿದ 342ನೇ ಶಿವಾನುಭವ ಕಾರ್ಯಕ್ರಮದಲ್ಲಿ ವಕೀಲರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ `ಕಾನೂನು ಅರಿವು’ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಪಾತ್ರ ತುಂಬಾ ಮಹತ್ವದ್ದಾಗಿದೆ. ಭಾರತದ ಮೊದಲ ರಾಷ್ಟçಪತಿ ಮತ್ತು ಹೆಸರಾಂತ ವಕೀಲರಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರ ಜನ್ಮದಿನದ ನೆನಪಿಗಾಗಿ ಭಾರತದ ವಕೀಲ ಸಮುದಾಯವು ಅವರ ಜನ್ಮದಿನವನ್ನೇ ವಕೀಲರ ದಿನವೆಂದು ಆಚರಿಸುತ್ತಿದ್ದಾರೆ. ವಕೀಲರಿಗೂ ಹಾಗೂ ನ್ಯಾಯಾಧೀಶರಿಗೂ ಮಾನವೀಯತೆ, ಸಾಮಾನ್ಯ ಜ್ಞಾನ ಇರಬೇಕಾದದ್ದು ತುಂಬಾ ಅವಶ್ಯ ಎಂದು ವಿವರಿಸಿದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿಗಳಾದ ವೇ.ಮೂ ಮಹೇಶ್ವರ ಸ್ವಾಮಿ ಹೊಸಳ್ಳಿಮಠ ಆಶೀರ್ವಚನ ನೀಡಿ, ಇಂದಿನ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಇರಬೇಕಾಗಿದ್ದು ಅತ್ಯಗತ್ಯವಾಗಿದೆ. ಅದರ ಉಪಯುಕ್ತತೆಯನ್ನು ತಿಳಿದುಕೊಳ್ಳಬೇಕಾಗಿರುವುದು ಇಂದಿನ ತುರ್ತು ಎಂದರು.
ಸಿದ್ದಣ್ಣ ಜವಳಿ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಪಾಟೀಲ್ ಸ್ವಾಗತಿಸಿದರು. ಕುಂದ್ರಾಳ್ ಹಿರೇಮಠ ಎಂ.ವಿ ಕಾರ್ಯಕ್ರಮ ನಿರೂಪಿಸಿದರು. ಚೆನ್ನಯ್ಯ ಹಿರೇಮಠ್ ವಂದಿಸಿದರು.
ಇದೇ ಸಂದರ್ಭದಲ್ಲಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಆಯುರ್ವೇದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಜಿ.ಎಸ್. ಹಿರೇಮಠ ಅವರ ಜನ್ಮದಿನದ ಆಚರಿಸಿ ಅವರನ್ನು ಸಮಾರಂಭದ ಪರವಾಗಿ ಸತ್ಕರಿಸಲಾಯಿತು. 80 ವಸಂತಗಳನ್ನು ಪೂರೈಸಿದ ನ್ಯಾಯಾಧೀಶ ಎಸ್.ಜಿ. ಪಲ್ಲೇದರನ್ನು ಸತ್ಕರಿಸಲಾಯಿತು.
ಸಮಾರಂಭದ ಪ್ರಸಾದ ಸೇವೆಯನ್ನು ವಹಿಸಿಕೊಂಡಿದ್ದ ಡಾ. ರಾಜೇಶ್ ಭದ್ರಶೆಟ್ಟಿ, ನೀಲಮ್ಮ ಜವಳಿ, ಚನ್ನಯ್ಯ ಹಿರೇಮಠ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಚ್. ಬೇಲೂರು, ಬಿ.ಎಂ. ಬಿಳೆಯಲಿ, ಜಿ.ಎಂ. ಯಾನಮಶೆಟ್ಟಿ, ನಿಂಗಪ್ಪ ಬಳಿಗಾರ, ವೀರೇಶ್ವರ ಸ್ವಾಮಿ ಹೊಸಳ್ಳಿಮಠ ಮುಂತಾದವರಿದ್ದರು.
ಬಾಕ್ಸ್
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿಯ ಅಧ್ಯಕ್ಷ ಡಾ. ರಾಜೇಂದ್ರ ಮಾತನಾಡಿ, ಇತ್ತೀಚೆಗೆ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹಾಗೂ ಖ್ಯಾತ ಹಾಸ್ಯ ನಟ ಎಂ.ಎಸ್. ಉಮೇಶ್ ಅವರು ನಡೆದು ಬಂದ ದಾರಿಯನ್ನು ಅವಲೋಕಿಸಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿದರು.



