ವಿಜಯಸಾಕ್ಷಿ ಸುದ್ದಿ, ಗದಗ
ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ ಎಂದು ಕರೆ ಮಾಡಿದ ಖದೀಮನೊಬ್ಬ ಶಿಕ್ಷಕಿಯೊಬ್ಬರ ಸುಮಾರು 1 ಲಕ್ಷ ರೂ. ಹಣವನ್ನು ಖಾತೆಯಿಂದ ಎಗರಿಸಿದ್ದಾನೆ.
ಗದಗ ತಾಲೂಕಿನ ಹುಲಕೋಟಿಯ ಪ್ರತಿಷ್ಠಿತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುವ ಮಹಿಳೆಗೆ ಈ ರೀತಿಯ ವಂಚನೆ ಆಗಿದೆ.
ಸೆ. 1ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮ್ಮ ಎಟಿಎಂ ಕಾರ್ಡ್ ಬ್ಲಾಕ್ ಆಗಿದೆ. ಸರಿಪಡಿಸಲು ಅದರ ಸಂಖ್ಯೆ, ಪಿವಿವಿ ನಂಬರ್ ಹಾಗೂ ಸದ್ಯ ಬಳಸುತ್ತಿರುವ ಎಟಿಎಂ ಪಿನ್ ನೀಡುವಂತೆ ಕೇಳಿದ್ದಾನೆ.
ಶಿಕ್ಷಕಿಗೆ ಅನುಮಾನ ಬಂದಿದೆ. ನಿಮ್ಮ ಅಕೌಂಟ್ ಹುಲಕೋಟಿ ಶಾಖೆಯಲ್ಲಿಯೇ ಇರುವುದು ಎಂದು ಆ ವ್ಯಕ್ತಿ ಕನ್ನಡದಲ್ಲಿ ಹೇಳಿದಾಗ ಒಂದಿಷ್ಟು ವಿಶ್ವಾಸ ಮೂಡಿದೆ. ಎಟಿಎಂ ಕಾರ್ಡ್ ಮೇಲಿರುವ ನಂಬರ್ ಹೇಳಿದ ಮೇಲೆ, ಒಟಿಪಿ ನಂಬರ್ ಕೇಳಿದ ಆ ವ್ಯಕ್ತಿ ಒಡನೆಯೇ ತಲಾ 49,999 ರೂ.ಗಳಂತೆ ಎರಡು ಬಾರಿ ಹಣ ಡ್ರಾ ಮಾಡಿಕೊಂಡಿದ್ದಾನೆ.
ಹಣ ಖಾತೆಯಿಂದ ಹಿಂಪಡೆದಿರುವ ಬಗ್ಗೆ ಮೊಬೈಲ್ಗೆ ಎಸ್ಸೆಮ್ಮೆಸ್ ಬಂದಾಗ ಟೀಚರಮ್ಮನಿಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. ಕುಟುಂಬಸ್ಥರೊಂದಿಗೆ ಚರ್ಚಿಸಿ ತಡವಾಗಿ ದೂರು ನೀಡಿದ್ದಾರೆ. ಈ ಕುರಿತು ಗದಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ.