ಬೆಂಗಳೂರು: ಹವಾಮಾನ ವೈಪರೀತ್ಯಗಳು, ಮಾರುಕಟ್ಟೆ ಸಮಸ್ಯೆಗಳು ಸೇರಿದಂತೆ ಹಲವು ಸವಾಲುಗಳನ್ನು ಕೃಷಿಕರು ಎದುರಿಸುತ್ತಿದ್ದರೂ, ಈ ಎಲ್ಲ ವ್ಯತ್ಯಾಸಗಳ ನಡುವೆಯೂ ಕೆಲ ರೈತರು ಯಶಸ್ವಿಯಾಗಿ ಕೃಷಿ ನಡೆಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮನ್ವಯ ಟ್ರಸ್ಟ್, ಫುಡ್ ಚೈನ್ ಕೃಷಿ ಸಂಸ್ಥೆ, ಕೃಷಿ ತಂತ್ರಜ್ಞರ ಸಂಸ್ಥೆ ಹಾಗೂ ಐಸಿಎಆರ್–ಕೆವಿಕೆ ದಕ್ಷಿಣ ಕನ್ನಡ ಇವರ ಸಹಯೋಗದಲ್ಲಿ ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಒತ್ತು ನೀಡಿದರೆ ಕೃಷಿ ಅಭಿವೃದ್ಧಿ ಸಾಧ್ಯ. ರೈತರು ವೈಜ್ಞಾನಿಕ, ಸಾವಯವ, ಸಮಗ್ರ ಹಾಗೂ ಸುಸ್ಥಿರ ಕೃಷಿಯ ಕಡೆ ಹೆಚ್ಚಿನ ಗಮನಹರಿಸಿ, ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಸರ್ಕಾರ ಹಾಗೂ ಕೃಷಿ ವಿಶ್ವವಿದ್ಯಾಲಯಗಳು ಸದಾ ಸಹಕಾರ ನೀಡಲಿವೆ ಎಂದು ಭರವಸೆ ನೀಡಿದರು.
ರೈತರ ಬದುಕು ಹಸನು ಮಾಡುವುದು ನಮ್ಮ ಕರ್ತವ್ಯ. ನಾನು ಕೃಷಿ ಸಚಿವನಾದ ನಂತರ ಹಲವು ಮಹತ್ವದ ಬದಲಾವಣೆಗಳನ್ನು ತಂದಿದ್ದೇನೆ. ಕಳೆದ ಎರಡು ನೆರೆ ವರ್ಷಗಳಲ್ಲಿ ರೈತರ ಬೆಳೆ ವಿಮೆಗಾಗಿ ಸರ್ಕಾರ 5,000 ಕೋಟಿ ರೂ. ಅನುದಾನ ನೀಡಿದ್ದು, ಕೃಷಿ ಯಾಂತ್ರಿಕರಣಕ್ಕೆ 1,500 ಕೋಟಿ ರೂ. ಸಹಾಯಧನ ಒದಗಿಸಲಾಗಿದೆ ಎಂದು ವಿವರಿಸಿದರು. ನಮ್ಮ ಸರ್ಕಾರ ಕೃಷಿಗೆ ಬೆಂಬಲ ನೀಡಲು, ಸಂಶೋಧನೆಗಳನ್ನು ಉತ್ತೇಜಿಸಲು ಹಾಗೂ ರೈತರಿಗೆ ಪ್ರೋತ್ಸಾಹ ನೀಡಲು ಸದಾ ಸಿದ್ಧವಾಗಿದೆ ಎಂದು ಅವರು ಹೇಳಿದರು.



