ವಿಜಯಸಾಕ್ಷಿ ಸುದ್ದಿ, ಗದಗ: ಗದುಗಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾಗಿರುವ ದಿ. ಆಝಾದ್ ಕೋ-ಆಪ್ ಬ್ಯಾಂಕ್ ಗ್ರಾಹಕರಿಗೆ ಉತ್ತಮ ಸೇವೆ, ಸೌಲಭ್ಯ ಒದಗಿಸಲು ಬದ್ಧತೆಯಿಂದ ಕಾರ್ಯ ಮಾಡುತ್ತಿದೆ ಎಂದು ಬ್ಯಾಂಕ್ನ ಚೇರಮನ್ ಸರಫ್ರಾಜ್ ಅಹ್ಮದ್ ಎಸ್. ಉಮಚಗಿ ಹೇಳಿದರು.
ಅವರು ಬ್ಯಾಂಕ್ನ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಂಪರ್ಕ ಸಭೆ ಹಾಗೂ 2026ರ ದಿನದರ್ಶಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಹಕರು ಈ ಬ್ಯಾಂಕ್ನ ಮೇಲೆ ಇಟ್ಟಿರುವ ವಿಶ್ವಾಸದಿಂದಾಗಿ ಹಾಗೂ ಅವರ ಠೇವಣಿ, ಭದ್ರತಾ ಠೇವಣಿಯಿಂದಾಗಿ ಬ್ಯಾಂಕ್ ಲಾಭದೆಡೆಗೆ ಮುನ್ನಡೆದಿದೆ. ಬಡ ಮತ್ತು ಮಧ್ಯಮ ವರ್ಗದ ಸಣ್ಣ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಅವರು ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್ ಸಹಕರಿಸುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗದಗ ಹೆಸ್ಕಾಂನ ಅಧೀಕ್ಷಕ ಅಭಿಯಂತರರಾದ ನಜ್ಮುನ್ನಿಸಾ ಕೆ. ಅಲ್ಲಾವಲಿ ನೂತನ ವರ್ಷದ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿ, ಆಝಾದ್ ಬ್ಯಾಂಕ್ ಪ್ರಗತಿಪಥದಲ್ಲಿ ಸಾಗಿ ಬಂದಿರುವುದು ಹೆಮ್ಮೆಯ ವಿಚಾರ. ಬರಲಿರುವ ದಿನಗಳಲ್ಲಿ ಬ್ಯಾಂಕ್ ಗ್ರಾಹಕರಿಗೆ ಇನ್ನೂ ಹೆಚ್ಚಿನ ರೀತಿಯ ಸೌಲಭ್ಯಗಳನ್ನು ನೀಡಲಿ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶ ಮುಹಮ್ಮದ್ ಖಾನ್ ಪಠಾಣ, ಎಂ.ಎನ್. ಕುಕನೂರ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ್ನ ಗ್ರಾಹಕರಾದ ನಿವೃತ್ತ ಪ್ರಾಚಾರ್ಯ ಎಂ.ಎಲ್. ಗುಳೇದಗುಡ್ಡ, ಡಾ. ಪ್ಯಾರ ಅಲಿ ನೂರಾನಿ ಮಾತನಾಡಿದರು.
ಬಿಲಾಲವಲಿದ್ ಖಾಲಿದ್ ಕುರಾನ್ ಪಠಿಸಿದರು, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎ.ಜಿ. ಯರಗುಡಿ ಸ್ವಾಗತಿಸಿದರು. ಪ್ರಾ. ಮುಸ್ತಾನ ಅಲಿ ಶಿರಹಟ್ಟಿ ಪರಿಚಯಿಸಿ ನಿರೂಪಿಸಿದರು. ಟಿಕಣದಾರ ಹೊಸ ವರ್ಷದ ಗೀತೆ ಹಾಡಿದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ವಂದಿಸಿದರು.



