ವಿಜಯಸಾಕ್ಷಿ ಸುದ್ದಿ, ಗದಗ: ಕರುನಾಡು ಘರ್ಜನೆ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚುರಪಡಿಸುವಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆ ನೀಡುತ್ತಿದೆ. ಈ ಪತ್ರಿಕೆಯು ಹಳ್ಳಿಯಿಂದ ದಿಲ್ಲಿಯವರೆಗೂ ಸಾಮಾಜಿಕ, ಧಾರ್ಮಿಕ ಮತ್ತು ಬಡವರ, ರೈತರ, ಶ್ರಮಿಕರ ಪರವಾದ ಜನಪರವಾದ ವಿಚಾರಗಳನ್ನು ಪ್ರಕಟಿಸಿ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುವಂತಾಗಲಿ ಎಂದು ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಆಶೀರ್ವಚನ ನೀಡಿದರು.
ಅವರು ಕರುನಾಡು ಘರ್ಜನೆ ಪತ್ರಿಕೆಯ ವತಿಯಿಂದ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯಾಶ್ರಮದಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನರಗುಂದ ಶಾಸಕ ಸಿ.ಸಿ. ಪಾಟೀಲ ಹಾಗೂ ಕಾಟನ್ ಸೇಲ್ ಸೊಸೈಟಿಯಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ ಪತ್ರಿಕೆಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಗದಗ ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿಗಳಾದ ವಸಂತ ಮಡ್ಲೂರ ಮಾತನಾಡಿ, ಕರುನಾಡು ಘರ್ಜನೆ ಪತ್ರಿಕೆಯು ತನ್ನ ಪ್ರಾಮಾಣಿಕ ಸೇವೆ ಮತ್ತು ಜನಪರವಾದ ಉದ್ದೇಶದಿಂದ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿದೆ. ಈ ಪತ್ರಿಕೆಯು ಸಮಾಜದಲ್ಲಿನ ಅನ್ಯಾಯ, ಅಸಮಾನತೆಯನ್ನು ಎದುರಿಸಲು ಮತ್ತು ಜನರಿಗೆ ಸತ್ಯ ಮತ್ತು ನ್ಯಾಯದ ದಾರಿಯನ್ನು ತೋರಿಸಲು ತನ್ನದೇ ಆದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ ಮಾತನಾಡಿ, ಈ ಪತ್ರಿಕೆಯ ಸಂಪಾದಕರಾದ ಶೌಕತ್ ಕಾತರಕಿ ಮತ್ತು ಯಾಸೀನಸಾಬ ಬೋದ್ಲೆಖಾನ್ ಅವರ ನಿರಂತರ ಪ್ರಯತ್ನ ಮತ್ತು ಸಮರ್ಪಣೆಯಿಂದ ಸಮಾಜದಲ್ಲಿನ ಅಂತಿಮ ವ್ಯಕ್ತಿಗೂ ಧ್ವನಿಯಾಗುತ್ತಿದೆ. ಈ ಪತ್ರಿಕೆಯ ಮೂಲಕ ಸಮಾಜದಲ್ಲಿ ಒಂದು ಹೊಸ ದಿಕ್ಕನ್ನು ತೋರಿಸುತ್ತಿರುವ ತಂಡದ ಸೇವೆ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಶಿವಾನಂದ ತಮ್ಮನವರ, ಕರೀಮ್ ಸುಣಗಾರ, ಗಣೇಶ ಹುಬ್ಬಳ್ಳಿ, ಪ್ರಕಾಶ್ ಬನ್ನಿಗಿಡದ, ಹನಮಂತಪ್ಪ ರಾಂಪುರ, ಹನುಮಂತ ಪಲದ್ದೊಡಿ, ಕೃಷ್ಣ ಹಡಪದ, ಮೆಹಬೂಬ್ ರೋಣ, ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.
ಸಾಮಾಜಿಕ ಕಾರ್ಯಕರ್ತರಾದ ಉಡಚಪ್ಪ ಹಳ್ಳಿಕೇರಿ ಮಾತನಾಡಿ, ಕರುನಾಡು ಘರ್ಜನೆ ಪತ್ರಿಕೆಯು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಪತ್ರಿಕೆಯು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರವಾದ ವಿಚಾರಗಳನ್ನು ಪ್ರಚುರಪಡಿಸುತ್ತಿದೆ ಎಂದ ಅವರು ಕರುನಾಡು ಘರ್ಜನೆ ಪತ್ರಿಕೆಯ ತಂಡಕ್ಕೆ ಶುಭ ಹಾರೈಸಿದರು.



