ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜೀವ ಉಳಿಸುವ ಮಹಾನ್ ಕಾರ್ಯವಾಗಿರುವ ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಎಂದು ಕೊತಬಾಳ ಶ್ರೀ ಗಂಗಾಧರ ಮಹಾಸ್ವಾಮೀಜಿ ಹೇಳಿದರು.
ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಭಾರತೀಯ ರೆಡ್ಕ್ರಾಸ್ ಕೊಪ್ಪಳ ಶಾಖೆ, ಶ್ರೀ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾತ್ರೆಗಳಲ್ಲಿ ಇಂಥಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಈ ಕಾರ್ಯ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ಪ್ರತಿ ವರ್ಷ ನೂರಾರು ಜನರು ರಕ್ತದಾನ ಮಾಡುತ್ತಾರೆ. ಅದು ಹಲವರ ಜೀವ ಉಳಿಸಲು ಕಾರಣವಾಗುತ್ತದೆ ಎಂದರು.
ಇಟಗಿಯ ಶ್ರೀ ಗುರುಶಾಂತವೀರ ಮಹಾಸ್ವಾಮೀಜಿ ಮಾತನಾಡಿ, ರಕ್ತದಾನ ಎಲ್ಲ ದಾನಕ್ಕಿಂತಲೂ ಶ್ರೇಷ್ಠ ಕಾರ್ಯವಾಗಿದೆ. ಅರ್ಹ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕಾರ್ಯದಲ್ಲಿ ತೊಡಗಬೇಕಾಗಿದೆ. ಇದರಿಂದ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದರು.
ಅಭಿನವ ನಾಗಲಿಂಗ ಅವಧೂತರು, ಶ್ರೀ ಗುರುಸಿದ್ಧೇಶ್ವರ ಸ್ವಾಮೀಜಿ, ಶ್ರೀ ಬಸವಭೂಷಣ ಸ್ವಾಮೀಜಿ, ಶ್ರೀ ಯಶವಂತದೇವರು ಸ್ವಾಮೀಜಿ, ಶ್ರೀ ಬ್ರಹ್ಮಾನಂದ ಸ್ವಾಮಿಜಿಗಳು ಸಾನ್ನಿಧ್ಯ ವಹಿಸಿದ್ದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಶಾಖೆಯ ಉಪಸಭಾಪತಿ ಡಾ. ಶ್ರೀನಿವಾಸ ಹ್ಯಾಟಿ, ಕೊಪ್ಪಳ ಶಾಖೆಯ ಸಭಾಪತಿ ಸೋಮರಡ್ಡಿ ಅಳವಂಡಿ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರಾದ ಡಾ. ಮಹಾಂತೇಶ ಸಾಲಿಮಠ, ಉಪಸಭಾಪತಿಗಳಾದ ಡಾ. ಸಿ.ಎಸ್. ಕರಮುಡಿ, ಡಾ. ಮಂಜುನಾಥ, ನಿರ್ದೇಶಕರಾದ ಡಾ. ಶಿವನನಗೌಡ, ಡಾ. ಗವಿಸಿದ್ದನಗೌಡ, ರಾಜೇಶ ಯಾವಗಲ್, ಡಾ. ಸುರೇಶ ಹಕ್ಕಂಡಿ, ಡಾ. ಪರಮೇಶ್ವರ ಮೊದಲಾದವರು ಇದ್ದರು.



