ವಿಜಯಸಾಕ್ಷಿ ಸುದ್ದಿ, ಗದಗ:
‘ಅವತ್ತು(ನ.4) ಮಧ್ಯಾಹ್ನ ಎರಡು ಗಂಟೆಗೆ ಪೊಲೀಸರು ಮಗ(ಸಂತೋಷ)ನಿಗೆ ಪೋನ್ ಹಚ್ಚಿದ್ರು. ಪೊಲೀಸ್ರು ಪೋನ್ ಹಚ್ಚ್ಯಾರ ಸ್ಟೇಷನ್ಗೆ ಹೋಗಿ ಬರ್ತೀನಿ ಅಂತಾ ಹೇಳಿ ಎದ್ದು ಹೋದ. ಆದ್ರೆ, ಒಮ್ಮೆಲೆ ಸಂಜೆ ಪೊಲೀಸ್ರು ಫೋನ್ ಹಚ್ಚಿ ಜಿಲ್ಲಾಸ್ಪತ್ರೆಗೆ ಬರ್ರೀ ಅಂತಾ ಹೇಳಿದ್ರು. ಹೋಗಿ ನೋಡಿದ್ರ ಮಗ ಹೆಣವಾಗಿ ಬಿದ್ದಿದ್ದೋ ಎಪ್ಪಾ!’ ಎಂದು ಮೃತ ಸಂತೋಷನ ತಾಯಿ ಜನರ ಮುಂದೆ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರಂತೆ.
ಆದರ್ಶ ನಗರದ ಮೃತ ಸಂತೋಷನ ಸಾವು ಗದಗ-ಬೆಟಗೇರಿ ಅವಳಿ ನಗರದ ಜನರ ಸಂಶಯಕ್ಕೆ ಕಾರಣವಾಗಿದ್ದು, ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮನೆಯವರ ಪ್ರಕಾರ ಸಂತೋಷನಿಗೆ ಯಾವುದೇ ಖಾಯಿಲೆ ಇರಲಿಲ್ಲ. ಅಲ್ಲದೇ, ಅವನಿಗೆ ಪಿಟ್ಸ್ ರೋಗವೇ ಇರಲಿಲ್ಲವಂತೆ. ಆದರೆ, ಕೆಲ ಪೊಲೀಸ್ ಮೂಲಗಳು ಸಂತೋಷ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿದ್ದಾನೆ ಅಂತಾ ಹೇಳುತ್ತವೆ. ಇದು ಗೊಂದಲಕ್ಕೆ ಎಡೆಮಾಡಿಕೊಟ್ಟಂತಿದ್ದು, ಆರೋಗ್ಯವಾಗಿಯೇ ಇದ್ದ ಸಂತೋಷ ಪೊಲೀಸ್ ಠಾಣೆಗೆ ಹೋದ ಮೇಲೆ ಏನಾಗಿ ಮೃತಪಟ್ಟನೆಂಬ ಕುರಿತು ಕುಟುಂಬದವರಿಗೆ ಈಗಲೂ ಏನು ಗೊತ್ತಿಲ್ಲವಂತೆ.
ಎರಡು ದಿನ ಪೊಲೀಸರ ವಶದಲ್ಲಿದ್ದ ಪೋನ್!
ನ.4ರಂದು ಸಂತೋಷ ಗದಗ ಶಹರ ಪೊಲೀಸ್ ಠಾಣೆಗೆ ಬಂದ ದಿನದಿಂದ ಮೊನ್ನೆಯವರೆಗೂ(ನ.6) ರವರೆಗೂ ಆತನ ಮೊಬೈಲ್ ಪೊಲೀಸರ ವಶದಲ್ಲಿತ್ತಂತೆ. ಸಾವಿನ ಬಳಿಕ ಮನೆಯವರು ಸಂತೋಷನ ಮೊಬೈಲ್ ಕೊಡಿ ಎಂದು ಕೇಳಿದಾಗ. ಪೊಲೀಸರು ಮೊಬೈಲ್ ಕಳೆದಿದೆ ಎಂದು ಸುಳ್ಳು ಹೇಳಿದ್ದರಂತೆ. ಘಟನೆ ನಡೆದಾದ ಎರಡು ದಿನಗಳ ಬಳಿಕ ಅಂದರೆ ಮೊನ್ನೆ (ನ.6) ರಂದು ಪೊಲೀಸರು ಮನೆಯವರಿಗೆ ಸಂತೋಷನ ಮೊಬೈಲ್ ಕೊಟ್ಟಿದ್ದಾರಂತೆ. ಕೊಡುವಾಗ ಮೆಮೊರಿ ಕಾರ್ಡ್ ಹಾಳು (ಡ್ಯಾಮೇಜ್) ಮಾಡಿ ಸಾಕ್ಷ್ಯ ನಾಶ ಪಡಿಸಿದ್ದಾರಂತೆ. ಆದರೆ, ಪೊಲೀಸರು ಸಂತೋಷ ಮೊಬೈಲ್ ನಲ್ಲಿದ್ದ ಇವೆರಡನ್ನೂ ಹಾಳು ಮಾಡಿದ್ದು ಯಾಕೆ?
ಮರಣೋತ್ತರ ಪರೀಕ್ಷೆ ಮಾಡಿದ್ದು ಯಾಕೆ?
ಪೊಲೀಸ್ ಮೂಲಗಳೇ ಹೇಳುವ ಹಾಗೆ ಸಂತೋಷ ಯಾವುದೇ ದುರ್ಮರಣಕ್ಕೆ ಇಡಾಗಿಲ್ಲ. ಅಲ್ಲದೇ, ಸಂಶಯಾಸ್ಪದವಾಗಿಯೂ ಸತ್ತಿಲ್ಲ. ಹಾಗಿದ್ದಾಗ್ಯೂ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದ್ದಾರಂತೆ. ಪೋಸ್ಟ್ ಮಾರ್ಟ್ಂ ಮಾಡುವ ವೇಳೆ ಮೃತ ಸಂತೋಷನ ಮನೆಯವರ ಅನುಮತಿಯನ್ನು ಕೇಳಿಲ್ಲವಂತೆ. ಹಾಗಿದ್ದಾಗ ಪೊಲೀಸರು ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದ್ಯಾಕೆ? ಮರಣೋತ್ತರ ಪರೀಕ್ಷೆ ಮಾಡಲೇ ಬೇಕೆಂದಿದ್ದರೆ, ಮನೆಯವರ ಅನುಮತಿ ಪಡೆಯಲಿಲ್ಲ ಯಾಕೆ?
ಸಂತೋಷನ ಮೃತದೇಹ ಹೂಳದೇ ಸುಟ್ಟಿದ್ದು ಯಾಕೆ?
ಪೊಲೀಸರ ಹೊಡೆತದಿಂದಲೇ ಮೃತಪಟ್ಟಿದ್ದಾನೆ ಎನ್ನಲಾಗುತ್ತಿರುವ ಸಂತೋಷ ಲಿಂಗಾಯತ ಸಮುದಾಯಕ್ಕೆ ಸೇರಿದವನಾಗಿದ್ದು, ಬಹುತೇಕ ಆ ಸಮುದಾಯದಲ್ಲಿ ಮರಣ ಹೊಂದಿದವರನ್ನು ಮಣ್ಣಲ್ಲಿ ಹೂಳುತ್ತಾರೆ. ಅಲ್ಲದೇ, ಈ ಸಮುದಾಯದವರು ಅಪಘಾತ ಸೇರಿ ಇನ್ನಿತರ ಘಟನೆಗಳಲ್ಲಿ ದುರ್ಮರಣಕ್ಕೀಡಾದರನ್ನು ಮಾತ್ರ ಹೂಳದೇ ಸುಟ್ಟು ಹಾಕುತ್ತಾರೆ. ಆದರೆ, ಸಂತೋಷನ ಮೃತ ದೇಹವನ್ನು ಹೂಳದೇ ಸುಟ್ಟು ಹಾಕಿದ್ದು ಯಾಕೆ? ಎಂಬ ಅವಳಿ ನಗರದ ಜನರ ಪ್ರಶ್ನೆಗಳಿಗೆ ಪೊಲೀಸರೇ ಉತ್ತರಿಸಬೇಕಿದೆ.
ಮಾಧ್ಯಮದ ಎದುರು ಮಾತಾಡದ ತಾಯಿ
ಅನೌಪಚಾರಿಕವಾಗಿ ಜನರ ಎದುರು ಪೊಲೀಸರ ಕರ್ಮಕಾಂಡದ ಬಗ್ಗೆ, ಮಗನ ಕೊಂದಿರುವ ಕುರಿತು ಬಾಯಿ ಬಿಡುವ ತಾಯಿ ಅನಸಮ್ಮ, ಮಾಧ್ಯಮದ ಮುಂದೆ ಮಾತ್ರ ಬಾಯಿ ಬಿಡುತ್ತಿಲ್ಲ. ಕಾರಣ ಪೊಲೀಸರ ಭಯ. ಮಾಧ್ಯಮದ ಮುಂದೆ ಮಾತೆತ್ತಿದರೆ ಎಪ್ಪಾ ನನಗ್ಯಾರು ದಿಕ್ಕಿಲ್ಲ…. ನಾ ಏನೂ ಮಾತಾಡಲ್ಲ ಅಂತಾ ಹೇಳ್ತಾಳೆ. ಆದರೆ ಮಾಧ್ಯಮದ ಮುಂದೆ ಮಾತ್ರ ಕೈ ಮುಗಿದು ನ್ಯಾಯ ಕೊಡಿಸಿ ಅಂತ ಅಂಗಲಾಚುತ್ತಿದ್ದಾಳೆ.
ಅಷ್ಟಕ್ಕೂ ಆಗಿದ್ದಾದರೂ ಏನು?
ಸಂತೋಷ ಕಬ್ಜಾದಾರರ ಜೊತೆಗೆ ಜಗಳ ಮಾಡಿ, ಅವಾಚ್ಯವಾಗಿ ಬೈದಾಡಿದ್ದನಂತೆ. ಅಲ್ಲದೇ, ನೀರು, ವಿದ್ಯುತ್ ಕಟ್ ಮಾಡಿದ್ದನಂತೆ. ಆದರೆ, ಇದೇನೂ ಅಷ್ಟೊಂದು ದೊಡ್ಡ ವಿಷಯ ಅಲ್ಲ ಅಂತಾರೆ ಪ್ರಜ್ಞಾವಂತರು. ಸಣ್ಣ ಪುಟ್ಟ ಜಗಳ ಮಾಡಿಕೊಂಡು ಬಂದ ನೂರಾರು ಜನರ ನಡುವೆ ರಾಜೀ ಸಂಧಾನ ಮಾಡಿ ಕಳುಹಿಸುವ ಪೊಲೀಸರು ಯಾಕೀಷ್ಟು ಹೃದಯಹೀನರಾದರು ಎಂಬುದು ಸಾರ್ವಜನಿಕರ ಪ್ರಶ್ನೆ.