ವಿಜಯಸಾಕ್ಷಿ ಸುದ್ದಿ, ಡಂಬಳ: ಗ್ರಾಮದಲ್ಲಿ ಜರುಗಿರುವ ಜಾತ್ರಾ ಮಹೋತ್ಸವ ಸೇರಿದಂತೆ ಪ್ರತಿ ವರ್ಷ ನಡೆಯುವ ಗ್ರಾಮೀಣ ಜಾತ್ರೆಗಳು ಜನರ ಮನರಂಜನೆಗೆ ಪ್ರಮುಖ ಸ್ಥಳಗಳಾಗಿವೆ. ಇಂತಹ ಜಾತ್ರೆಗಳಲ್ಲಿ ವಿವಿಧ ಆಟಗಳು, ವ್ಯಾಪಾರ ಮಳಿಗೆಗಳು ಹಾಗೂ ಆಹಾರ ಮಳಿಗೆಗಳು ಕಾಣಸಿಗುತ್ತವೆ. ಇವುಗಳ ಜೊತೆಗೆ ಪಿನ್ ಬಾಲ್ ಆಟದಂತಹ ಕೆಲವು ಆಟಗಳು ಜೂಜಿನ ರೂಪವನ್ನು ಪಡೆದುಕೊಳ್ಳುತ್ತಿರುವುದು ಯುವಕರನ್ನು ದಾರಿ ತಪ್ಪಿಸುವ ಕೇಂದ್ರಗಳಾಗಿವೆ.
ಪಿನ್ ಬಾಲ್ ಆಟದಲ್ಲಿ ಆಟಗಾರನು ನಿರ್ದಿಷ್ಟ ಮೊತ್ತದ ಹಣವನ್ನು ಪಾವತಿಸಿ ಚೆಂಡನ್ನು ಯಂತ್ರದಲ್ಲಿ ಬಿಡುತ್ತಾನೆ. ಚೆಂಡು ಬಿದ್ದ ಸ್ಥಳದ ಆಧಾರದ ಮೇಲೆ ಹಣ ನಿಗದಿಯಾಗುತ್ತದೆ. ಆಟವು ಕೇವಲ ಮನರಂಜನೆಯ ಮಟ್ಟವನ್ನು ಮೀರಿ ಜೂಜಿನ ಸ್ವರೂಪ ಪಡೆಯುತ್ತದೆ.
ಜಾತ್ರೆಯಲ್ಲಿ ನಡೆಯುವ ಪಿನ್ ಬಾಲ್ ಗ್ಯಾಂಬ್ಲಿಂಗ್ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಮಕ್ಕಳು ಮತ್ತು ಯುವಕರು ಸುಲಭವಾಗಿ ಆಕರ್ಷಿತರಾಗುತ್ತಾರೆ. ಹಣದ ನಷ್ಟ ಮತ್ತು ವ್ಯಸನಕ್ಕೆ ದಾರಿ ಮಾಡಿಕೊಡುತ್ತದೆ. ಅಕ್ರಮ ಜೂಜಿನ ಚಟ ಬೆಳೆಸುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಕಾನೂನು ಮತ್ತು ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ ಉಂಟುಮಾಡುತ್ತದೆ.
ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಜೂಜು ನಡೆಸುವುದು ಅಪರಾಧವಾಗಿದ್ದು, ಸ್ಥಳೀಯ ಆಡಳಿತ ಮತ್ತು ಪೊಲೀಸ್ ಇಲಾಖೆ ಇಂತಹ ಚಟುವಟಿಕೆಗಳ ಮೇಲೆ ನಿಗಾ ವಹಿಸಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮಸ್ಥರು.
ಜಾತ್ರೆಗಳು ಆರೋಗ್ಯಕರ ಮನರಂಜನೆಯ ಕೇಂದ್ರಗಳಾಗಿರಬೇಕು. ಪಿನ್ ಬಾಲ್ ಆಟವನ್ನು ಗ್ಯಾಂಬ್ಲಿಂಗ್ ರೂಪದಲ್ಲಿ ನಡೆಸುವುದು ಸಮಾಜಕ್ಕೆ ಹಾನಿಕಾರಕವಾಗಿದೆ. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಇಂತಹ ಆಟಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಮಂಜಯ್ಯಸ್ವಾಮಿ ಅರವಟಗಿಮಠ ಆಗ್ರಹಿಸಿದ್ದಾರೆ.



