HomeGadag Newsಕುಮಾರ ಶಿವಯೋಗಿಗಳ ಸಮಾಜ ಸೇವೆ ಅನನ್ಯ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ಕುಮಾರ ಶಿವಯೋಗಿಗಳ ಸಮಾಜ ಸೇವೆ ಅನನ್ಯ: ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಶಿವಯೋಗ ಮಂದಿರದಲ್ಲಿ ಮಠಗಳನ್ನು ನಿರ್ವಹಿಸಲು ಸನ್ನದ್ಧರಾಗುವ ವಟುಗಳನ್ನು ತಯಾರಿಸುವ ಗುರುಕುಲವನ್ನು ಸ್ಥಾಪಿಸಿ ಈ ನಾಡಿಗೆ ಕಲ್ಯಾಣವನ್ನುಂಟುಮಾಡಿದವರು ಹಾನಗಲ್ಲ ಗುರುಕುಮಾರ ಶಿವಯೋಗಿಗಳು. ಅವರ ದೂರದೃಷ್ಟಿಯ ಫಲವಿಂದ ಬೆಳೆದು ಹೆಮ್ಮರವಾಗಿ ನಾಡಿನಾದ್ಯಂತ ಅನೇಕ ಹರ ಗುರು ಚರ ಮೂರ್ತಿಗಳನ್ನು ಕಾಣುವಲ್ಲಿ ಅವರ ಸೇವೆ ಅಪಾರವಾಗಿದೆ. ಕುಮಾರ ಶಿವಯೋಗಿಗಳು ಈ ನಾಡಿಗೆ, ಸಮಾಜಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾದುದು ಎಂದು ಹಾಲಕೆರೆ ಸಂಸ್ಥಾನ ಮಠದ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳವರು ಹೇಳಿದರು.

ಸಮೀಪದ ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದಲ್ಲಿ ಸೋಮವಾರ ಜರುಗಿದ ಲಿಂ. ಶ್ರೀ ಕುಮಾರ ಮಹಾಶಿವಯೋಗಿಗಳವರ 95ನೇ ಪುಣ್ಯ ಸ್ಮರಣೋತ್ಸವ ಹಾಗೂ ರಥೋತ್ಸವದ ನಂತರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಆಶೀರ್ವಚನ ನೀಡಿದರು.

ಹಾನಗಲ್ಲ ಕುಮಾರ ಶಿವಯೋಗಿಗಳು, ಹಾವೇರಿಯ ಶಿವಬಸವ ಸ್ವಾಮೀಜಿಗಳವರು ಶಿವಯೋಗ ಮಂದಿರದ ಶಾಖಾ ಮಠವನ್ನು ನಿಡಗುಂದಿಕೊಪ್ಪದಲ್ಲಿ ಸ್ಥಾಪಿಸಿ ಈ ಭಾಗದ ಜನರಿಗೆ ಆರೋಗ್ಯ ದಾಸೋಹ ನೀಡುವ ಕಾರ್ಯಕ್ಕೆ ಇಲ್ಲಿನ ಸ್ವಾಮೀಜಿಗಳನ್ನು ಹಚ್ಚಿದರು. ಅವರ ಅಪೇಕ್ಷೆಯಂತೆ ಶ್ರೀಮಠದ ಚನ್ನಬಸವ ಸ್ವಾಮೀಜಿ, ಶಿವಬಸವ ಸ್ವಾಮೀಜಿ ಆರೋಗ್ಯ ದಾಸೋಹದ ಕಾರ್ಯವನ್ನು ಅನವರತ ಮಾಡುತ್ತ ಬಂದರು.

ಕರ್ನಾಟಕದಲ್ಲಿನ ಬಹುತೇಕ ಮಠಗಳು ಅನ್ನ ದಾಸೋಹ, ಶೈಕ್ಷಣಿಕ ದಾಸೋಹ ಮುಂತಾದವುಗಳನ್ನು ಮಾಡುತ್ತ ಬಂದಿವೆ. ಆದರೆ ಭಕ್ತ ಜನತೆಗೆ ಅತಿ ಅವಶ್ಯಕವಾದ ಆರೋಗ್ಯ ದಾಸೋಹವನ್ನು ನೀಡುವ ಮಠವಿದ್ದರೆ ಅದು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರವಾಗಿದೆ. ಈ ಹಿಂದಿನ ಶ್ರೀಗಳು ಕೈಗೊಂಡ ಆರೋಗ್ಯ ದಾಸೋಹವನ್ನು ಇಂದಿನ ಪೀಠಾಧಿಪತಿಗಳಾಗಿರುವ ಅಭಿನವ ಚನ್ನಬಸವ ಸ್ವಾಮೀಜಿ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಈಗೀಗ ಆಯುರ್ವೇದಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀಮಠದಿಂದ ಆಯುರ್ವೇದ ಕುರಿತು ಒಂದು ಸಂಶೋಧನಾ ಕೇಂದ್ರ ಪ್ರಾರಂಭಗೊಂಡರೆ ಅದು ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ. ಈ ದಿಶೆಯಲ್ಲಿ ಶ್ರೀಮಠದ ಈಗಿನ ಸ್ವಾಮೀಜಿಗಳು ಕಾರ್ಯ ಪ್ರವೃತ್ತರಾಗಲಿ ಎಂದರು.

ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಂಕಲಗಿಯ ಅಡವಿ ಸಿದ್ಧೇಶ್ವರ ಸ್ವಾಮೀಜಿ, ಗದಗ-ಹೊಸಪೇಟೆಯ ಚಂದ್ರಶೇಖರ ದೇವರು, ಲಿಂಗನಾಯಕನ ಹಳ್ಳಿಯ ನಿರಂಜನ ದೇವರು, ಹರ-ಗುರು-ಚರ ಮೂರ್ತಿಗಳು ಉಪಸ್ಥಿತರಿದ್ದರು. ಶಿಕ್ಷಕ ಆರ್.ವಿ. ಬೆಲ್ಲದ ನಿರ್ವಹಿಸಿದರು.

ಬೆಳಿಗ್ಗೆ ಬೈಲಹೊಂಗಲ ಮೂರುಸಾವಿರ ಶಾಖಾಮಠದ ಪ್ರಭು ನೀಲಕಂಠ ಸ್ವಾಮೀಜಿಗಳ ಅಡ್ಡಪಲ್ಲಕ್ಕಿ ಮಹೋತ್ಸವವು ಸಡಗರ ಸಂಭ್ರಮದಿಂದ ಜರುಗಿತು.

ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ಶ್ರೀ ಮಠದಲ್ಲಿ ಹಿಂದಿನಿಂದಲೂ ನಡೆದು ಬಂದಿರುವ ಆರೋಗ್ಯ ದಾಸೋಹ ಎಂದಿಗೂ ಮುಂದುವರೆಯುತ್ತದೆ. ಈ ಮಠದ ಸದ್ಭಕ್ತರು ಮಠದ ಮೇಲೆ ಅಪಾರವಾದ ಶ್ರದ್ಧೆ ಭಕ್ತಿಯನ್ನಿರಿಸಿದ್ದಾರೆ. ಅವರೆಲ್ಲರ ಸಹಾಯ-ಸಹಕಾರಗಳಿಂದ ಶ್ರೀಮಠವು ಏಳಿಗೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮಠದ ಜಾತ್ರಾ ಮಹೋತ್ಸವದ ನಿಮಿತ್ತ ಎರಡು ದಿನಗಳ ಕಾಲ ನಡೆದ ಎಲ್ಲ ಸಭೆ, ಸಮಾರಂಭ, ಪ್ರಸಾದ ಮತ್ತಿತರ ಕಾರ್ಯಗಳಿಗೆ ಭಕ್ತರು ನೀಡಿದ ಸಹಕಾರವನ್ನು ನಾವೆಂದಿಗೂ ಮರೆಯುವಂತಿಲ್ಲ. ಈ ಶ್ರದ್ಧೆ ಭಕ್ತರಲ್ಲಿ ಎಂದಿಗೂ ಹೀಗೇ ಇರಲಿ ಎಂದು ಪ್ರಾರ್ಥಿಸಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!