ತುಮಕೂರು:- ನಗರದ ಶ್ರೀನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ.
ಹೆತ್ತ ತಾಯಿಯನ್ನೇ ಮಗಳು ಉಸಿರುಗಟ್ಟಿಸಿ ಕೊಂದಿರುವ ಪ್ರಕರಣ ಸಂಚಲನ ಮೂಡಿಸಿದೆ.
55 ವರ್ಷದ ಪುಷ್ಪಲತಾ ಮೃತ ದುರ್ದೈವಿ. 35 ವರ್ಷದ ಸುಚಿತ್ರಾ ತನ್ನ ತಾಯಿಯನ್ನು ಹತ್ಯೆ ಮಾಡಿದ ಮಗಳು. ಪುಷ್ಪಲತಾ ಹೆಸರಲ್ಲಿ ಮನೆ ಹಾಗೂ ಬ್ಯಾಂಕ್ ಖಾತೆಯಲ್ಲಿ ಸುಮಾರು 40 ಲಕ್ಷ ರೂಪಾಯಿ ಇದ್ದು, ಆಸ್ತಿಯನ್ನು ತಮ್ಮದಾಗಿಸಿಕೊಳ್ಳಲು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇದೇ ವೇಳೆ ಕೊಲೆಗೆ ಮತ್ತೊಂದು ಕಾರಣವೂ ಇರಬಹುದೆಂದು ತನಿಖೆಯಲ್ಲಿ ತಿಳಿದುಬಂದಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಸುಚಿತ್ರಾಳ ತಂದೆ ನಿಧನರಾಗಿದ್ದರು. ತಾಯಿಯೇ ಮಾಟ–ಮಂತ್ರ ಮಾಡಿಸಿ ತಂದೆಯನ್ನು ಕೊಂದಿದ್ದಾಳೆ ಎಂದು ಜ್ಯೋತಿಷಿಯೊಬ್ಬ ಹೇಳಿದ್ದನೆಂಬ ಮಾಹಿತಿ ಲಭ್ಯವಾಗಿದೆ. ಆ ಮಾತುಗಳನ್ನು ನಂಬಿದ ಸುಚಿತ್ರಾ ಈ ಕೃತ್ಯಕ್ಕೆ ಕೈ ಹಾಕಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಪ್ರಕರಣ ಸಂಬಂಧ ಸುಚಿತ್ರಾ ಹಾಗೂ ಅವಳಿಗೆ ಸಹಕಾರ ನೀಡಿದ ಗಂಡ ಸುರೇಶ್ ಅವರನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ತನಿಖೆ ಮುಂದುವರಿದಿದೆ.



