ಮೈಸೂರು:- ಜಿಲ್ಲೆಯ ಸರಗೂರು ತಾಲೂಕಿನ ಮೊಳೆಯೂರು ವಲಯದ ಗ್ರಾಮಸ್ಥರಿಗೆ ಆತಂಕ ಸೃಷ್ಟಿಸಿದ್ದ ಸುಮಾರು 35 ವರ್ಷದ ಗಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
ಮಟದಕಟ್ಟೆ ಬಳಿಯ ಮೂರುಗುಂಡಿ ಹಳ್ಳದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಾಕಾನೆಗಳ ಸಹಾಯ ಪಡೆಯಲಾಗಿತ್ತು. ಇತ್ತೀಚೆಗೆ ಮೊಳೆಯೂರು ಗ್ರಾಮದಲ್ಲಿ ಒಬ್ಬ ಆದಿವಾಸಿ ವ್ಯಕ್ತಿ ಈ ಕಾಡಾನೆ ದಾಳಿಗೆ ಬಲಿಯಾಗಿದ್ದ ಹಿನ್ನೆಲೆ, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಕಳೆದ ನಾಲ್ಕು ದಿನಗಳಿಂದ ಅರಣ್ಯ ಇಲಾಖೆ ತೀವ್ರ ಕಾರ್ಯಾಚರಣೆ ನಡೆಸಿ, ಸಾಕಾನೆಗಳಾದ ಏಕಲವ್ಯ, ಸುಗ್ರೀವ, ಪ್ರಶಾಂತ ಮತ್ತು ಅಯ್ಯಪ್ಪ ಅವರ ನೆರವಿನಿಂದ ಕಾಡಾನೆಯನ್ನು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಯಿತು. ಸೆರೆ ಹಿಡಿದ ಆನೆಯನ್ನು ರಾಂಪುರ ಆನೆ ಶಿಬಿರಕ್ಕೆ ರವಾನಿಸಲಾಗಿದೆ.
ಗ್ರಾಮಸ್ಥರು ಈಗ ನಿಟ್ಟುಸಿರು ಬಿಟ್ಟಿದ್ದು, ಅರಣ್ಯ ಇಲಾಖೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



