ಭಾರತೀಯ ಕ್ರಿಕೆಟ್ ತಾರೆ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹ ರದ್ದಾದ ಬಳಿಕ ಹುಟ್ಟಿಕೊಂಡ ವಿವಾದ ಗಂಭೀರ ಕಾನೂನು ತಿರುವು ಪಡೆದುಕೊಂಡಿದೆ. ಮ್ಯೂಸಿಕ್ ಕಂಪೋಸರ್ ಪಲಾಶ್ ಮುಚ್ಚಲ್ ವಿರುದ್ಧ ಹರಿದಾಡುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ.
ವಿದ್ನ್ಯಾನ್ ಮಾನೆ ಮಾಡಿದ ಸಾರ್ವಜನಿಕ ಹೇಳಿಕೆಗಳು ಪಲಾಶ್ ಅವರ ಘನತೆ ಹಾಗೂ ಸಾಮಾಜಿಕ ಸ್ಥಾನಮಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಹೆಚ್ಚಿನ ಹಾನಿಯನ್ನು ತಡೆಯುವ ಅಗತ್ಯವಿದೆ ಎಂದು ಹೇಳಿ, ಮುಂದಿನ ವಿಚಾರಣೆವರೆಗೆ ಪಲಾಶ್ ಕುರಿತು ಯಾವುದೇ ಮಾನಹಾನಿಕಾರಕ ಹೇಳಿಕೆಗಳನ್ನು ನೀಡದಂತೆ ಮಾನೆ ಅವರಿಗೆ ತಕ್ಷಣದ ತಡೆ ವಿಧಿಸಲಾಗಿದೆ.
ಮಾನೆ ಅವರ ಆರೋಪದ ಪ್ರಕಾರ, 23 ನವೆಂಬರ್ 2025ರಂದು ನಡೆದ ಮದುವೆ ಸಂಭ್ರಮಾಚರಣೆಯ ವೇಳೆ ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ಹೇಳಲಾಗಿದೆ. ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳಿಗೆ ಕಾರಣವಾಗಿದ್ದವು.
ಪಲಾಶ್ ಪರ ವಕೀಲ ಶ್ರೇಯಾನ್ಶ್ ಮಿಥಾರೆ, “ನ್ಯಾಯಾಲಯದ ತೀರ್ಪು ನಮ್ಮ ಕಕ್ಷಿದಾರರ ಗೌರವವನ್ನು ಕಾಪಾಡುವ ಮಹತ್ವದ ಹೆಜ್ಜೆ. ಸುಳ್ಳು ಆರೋಪಗಳ ವಿರುದ್ಧ ಕಾನೂನು ರಕ್ಷಣೆ ದೊರೆತಿದೆ,” ಎಂದು ಹೇಳಿದ್ದಾರೆ.
ಪ್ರಕರಣದ ಅಂತಿಮ ತೀರ್ಪು ದೇಶವ್ಯಾಪಿ ಗಮನ ಸೆಳೆಯುವ ಸಾಧ್ಯತೆ ಇದೆ.



