ವಿಜಯಸಾಕ್ಷಿ ಸುದ್ದಿ, ಕೊಟ್ಟೂರು: ಮಹಾಶಿವರಾತ್ರಿ ಅಂಗವಾಗಿ ಕೊಟ್ಟೂರಿನಲ್ಲಿ ಭಕ್ತಿ, ಭಾವನೆ ಮತ್ತು ಭಕ್ತರ ಹರಿವಿನ ನಡುವೆ ಧಾರ್ಮಿಕ ಸಡಗರ ಮನೆಮಾಡಿತು. ಬುಧವಾರದ ಮಹಾಶಿವರಾತ್ರಿಯಂದು ಮಹಿಳೆಯರು ಮತ್ತು ಪುರುಷರು ಸೇರಿ ಗದ್ದಿಕಲ್ಲೇಶ್ವರ ಈಶ್ವರ ಲಿಂಗಮೂರ್ತಿಗೆ ಪೂಜಾ–ಅಭಿಷೇಕ ನೆರವೇರಿಸಿ ಭಕ್ತಿ ಸಮರ್ಪಿಸಿದರು.
ಮಹಾಶಿವರಾತ್ರಿ ಹಬ್ಬವು ಕೊಟ್ಟೂರಿನಲ್ಲಿ ನಡೆಯುತ್ತಿರುವ ಕೊಟ್ಟೂರೇಶ್ವರ ಜಾತ್ರೆಯ ಸಂಭ್ರಮಕ್ಕೆ ಮತ್ತಷ್ಟು ಮೆರಗು ನೀಡಿತು. ಪಟ್ಟಣದಾದ್ಯಂತ “ಓಂ ನಮಃ ಶಿವಾಯ” ಮಂತ್ರಘೋಷ, ಶಿವನಾಮ ಜಪ, ಭಕ್ತಿಗೀತೆಗಳ ನಾದ ಮೊಳಗುತ್ತಾ ಭಕ್ತರ ಮನಸ್ಸಿಗೆ ಆಧ್ಯಾತ್ಮಿಕ ಮುದ ನೀಡಿತು.
ಬೆಳಗಿನ ಜಾವವೇ ಶ್ರೀ ಕೊಟ್ಟೂರೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ ನೆರವೇರಿಸಿ ಶಿವರಾತ್ರಿ ಆಚರಣೆ ಆರಂಭವಾಯಿತು. ಸಾವಿರಾರು ಭಕ್ತರು ಉದ್ದನೆಯ ಸಾಲಿನಲ್ಲಿ ನಿಂತು ದರ್ಶನ ಪಡೆದು ಹರಕೆ ತೀರಿಸಿದರು. ಶ್ರೀಸ್ವಾಮಿಯ ಮೂರು ಪ್ರಮುಖ ಮಠಗಳಾದ ಹಿರೇಮಠ, ತೊಟ್ಟಿಲು ಮಠ ಹಾಗೂ ಗಚ್ಚಿನಮಠಗಳಿಗೆ ಭಕ್ತರು ದಂಡು ದಂಡಾಗಿ ತೆರಳಿ ಪೂಜೆ ಸಲ್ಲಿಸಿದರು.
ಪಟ್ಟಣದ ಪ್ರಮುಖ ಶಿವಕ್ಷೇತ್ರಗಳಾದ ಗದ್ದಿಕಲ್ಲೇಶ್ವರ, ಮಳೆಮಲ್ಲೇಶ್ವರ, ಸಿರಿಮಠಲಿಂಗೇಶ್ವರ, ಚಂದ್ರಮೌಳೇಶ್ವರ, ಮಾರ್ಕಂಡೇಶ್ವರ, ೧೦೮ ಶಿವಲಿಂಗಗಳ ದೇವಸ್ಥಾನ, ಸೋಮಲಿಂಗೇಶ್ವರ, ರಾಮಲಿಂಗೇಶ್ವರ, ಹ್ಯಾಳ್ಯಾ ಸಮೀಪದ ಪಂಪಾಪತೇಶ್ವರ ಹಾಗೂ ಅಂಬಳಿಯ ಕಲ್ಲೇಶ್ವರ ಗುಡಿಗಳಿಗೆ ಬೆಳಗ್ಗಿನಿಂದಲೇ ಭಕ್ತರು ಭೇಟಿ ನೀಡಿ ರುದ್ರಾಭಿಷೇಕ, ವಿಶೇಷ ಪೂಜೆಗಳಲ್ಲಿ ಪಾಲ್ಗೊಂಡರು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಹಾಲು, ಬಿಲ್ವಪತ್ರೆ, ಫಲ–ಪುಷ್ಪ ಸಮರ್ಪಿಸಿ ಶಿವನ ಆರಾಧನೆ ನಡೆಸಿದರು.
ಗದ್ದಿಕಲ್ಲೇಶ್ವರ ದೇವಸ್ಥಾನದಲ್ಲಿ ರಾತ್ರಿಯಿಡೀ ಮಹಾರುದ್ರಾಭಿಷೇಕ ಕೈಂಕರ್ಯಗಳ ಸಿದ್ಧತೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು. ಭಜನೆ, ಶಿವಕೀರ್ತನೆಗಳ ಮೂಲಕ ಭಕ್ತರಲ್ಲಿಯ ಆಧ್ಯಾತ್ಮಿಕ ಉತ್ಸಾಹ ಇನ್ನಷ್ಟು ಹೆಚ್ಚಿತು.
ತಾಲೂಕಿನ ಉಜ್ಜಯಿನಿ ಸದ್ದರ್ಮ ಪೀಠದಲ್ಲೂ ಮಹಾಶಿವರಾತ್ರಿ ಸಂಭ್ರಮ ವಿಶೇಷವಾಗಿ ಕಂಡುಬಂತು. ಸದ್ದರ್ಮ ಪೀಠದ ಒಡೆಯ ಮಹಾಮರುಳಸಿದ್ದ ಸ್ವಾಮಿಯ ಲಿಂಗಮೂರ್ತಿಗೆ ವಿಶೇಷ ಪೂಜಾ–ಮಹಾರುದ್ರಾಭಿಷೇಕ ನೆರವೇರಿಸಲಾಯಿತು. ಜಗದ್ಗುರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮರುಳಸಿದ್ದೇಶ್ವರ ಸ್ವಾಮಿಯ ಮೂಲಮೂರ್ತಿಗೆ ಕ್ಷೀರಾಭಿಷೇಕ ಸೇರಿದಂತೆ ವಿವಿಧ ಪೂಜೆಗಳನ್ನು ಸಲ್ಲಿಸಿದರು.
ಒಟ್ಟಾರೆ, ಕೊಟ್ಟೂರಿನಲ್ಲಿ ಮಹಾಶಿವರಾತ್ರಿ ಹಬ್ಬ ಭಕ್ತರ ನಂಬಿಕೆ, ಭಕ್ತಿ ಹಾಗೂ ಧಾರ್ಮಿಕ ಏಕತೆಯ ಸಂಕೇತವಾಗಿ ಅದ್ಧೂರಿಯಾಗಿ ಜರುಗಿತು.



