ಲಕ್ಷ್ಮೇಶ್ವರ: ಆಸ್ತಿ ವಿಚಾರಕ್ಕೆ ಶುರುವಾದ ಗಲಾಟೆ ತಂದೆಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಗೋವನಾಳ ಗ್ರಾಮದಲ್ಲಿ ಜರುಗಿದೆ.
ಪಾಪಿ ಮಗನಿಂದಲೇ ತಂದೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಶಂಕರಗೌಡ ಕುಬೇರಗೌಡ ದ್ಯಾವನಗೌಡ್ರ (60) ಕೊಲೆಯಾದ ತಂದೆ. ಪ್ರಭು ಶಂಕರಗೌಡ ದ್ಯಾವನಗೌಡ್ರ (23) ಕೊಲೆ ಮಾಡಿದ ಪಾಪಿ ಮಗ.
ಪ್ರಾಥಮಿಕ ತನಿಖೆ ಪ್ರಕಾರ, ಕುಟುಂಬದ 2 ಎಕರೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಜಗಳವೇ ಕೊಲೆಗೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಆರೋಪಿಯು ಕುಡಿದ ಮದ್ಯದಲ್ಲಿದ್ದ ಎನ್ನಲಾಗಿದೆ.
ಕೊಲೆಗೀಡಾದ ಶಂಕರಗೌಡನಿಗೆ ಪ್ರಭು ಎರಡನೇ ಪತ್ನಿಯಿಂದ ಜನಿಸಿದ ಮಗನಾಗಿದ್ದಾನೆ. ಸುಮಾರು 30 ವರ್ಷಗಳ ಹಿಂದೆ ಮೊದಲ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ದರು ಎಂಬ ಸಂಗತಿಯೂ ಹೊರಬಿದ್ದಿದೆ.
ಘಟನೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ ಜಗದೀಶ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.



