ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಇಂದು ದೇಶದಲ್ಲಿ ಬಿಜೆಪಿ ದೊಡ್ಡ ಪ್ರಮಾಣದಲ್ಲಿ ಬೆಳೆದು ನಿಂತಿದ್ದು, ಅದರಂತೆ ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲುತ್ತದೆ ಎಂದು ಬಿಜೆಪಿ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಹೇಳಿದರು.
ಅವರು ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ವೈ ಅವರ ಜನ್ಮದಿನದ ಪ್ರಯುಕ್ತ ಹಾಗೂ ಶಾಸಕ ಡಾ. ಚಂದ್ರು ಲಮಾಣಿ ಲೋಕಾಯುಕ್ತ ಕೇಸ್ನಲ್ಲಿ ನಿರ್ದೋಷಿಯಾಗಿ ಬಿಡುಗಡೆ ಆಗಿ ಬರಲಿ ಎಂಬ ಉದ್ದೇಶದಿಂದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಬಿಜೆಪಿ ಪಕ್ಷವನ್ನು ಗ್ರಾಮೀಣ ಭಾಗದಿಂದ ಗಟ್ಟಿಯಾಗಿ ಬೆಳೆಸಿದ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ತಂದಿದ್ದಾರೆ. ಅವರ ಸೇವೆಯನ್ನು ಬಿಜೆಪಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಕುತಂತ್ರದಿಂದ ಲೋಕಾಯುಕ್ತ ಬಲೆಗೆ ಸಿಲುಕಿರುವ ಶಾಸಕ ಡಾ. ಚಂದ್ರು ಲಮಾಣಿ ಅವರು ಆದಷ್ಟು ಶೀಘ್ರ ಲೋಕಾಯುಕ್ತ ಕೇಸ್ನಲ್ಲಿ ನಿರ್ದೋಷಿಯಾಗಿ ಹೊರಗೆ ಬಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಿ ಎಂದು ಹೇಳಿದರು.
ಯುವ ಮುಖಂಡ ನವೀನ ಹಿರೇಮಠ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಲ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ, ಥಾವರಪ್ಪ ಲಮಾಣಿ, ವಿಜಯಕುಮಾರ ಹತ್ತಿಕಾಳ, ಹಾಲಪ್ಪ ಸೂರಣಗಿ, ಬಾಬಣ್ಣ ವೇರ್ಣೇಕರ, ದುಂಡೇಶ ಕೊಟಗಿ, ಅನಿಲ ಮುಳಗುಂದ, ಡಿ.ವೈ. ಹುನಗುಂದ, ನೀಲಪ್ಪ ಹತ್ತಿ, ಪ್ರವೀಣ ಬೋಮಲೆ, ವಿಜಯ ಕುಂಬಾರ, ಬಸವರಾಜ ಕಲ್ಲೂರ, ಶಕ್ತಿ ಕತ್ತಿ, ಭೀಮಣ್ಣ ಯಂಗಾಡಿ, ಪ್ರವೀಣ ಪಾಟೀಲ, ರಾಮು ನಾಯಕ, ಉಳವೇಶಗೌಡ ಪಾಟೀಲ, ರಾಜಶೇಖರ ಶಿಗ್ಲಿಮಠ, ಮಹಾದೇವಪ್ಪ ಅಣ್ಣಿಗೇರಿ, ನಾಗನಗೌಡ ಪಾಟೀಲ್, ಮಂಜುನಾಥ ಬಸಾಪುರ, ರಮೇಶ ದನದಮನಿ, ವೀರೇಶ ಸಾಸಲವಾಡ, ಮಂಜುನಾಥ ಗಜಕೋಶ, ಹನುಮಂತ ಕೊಪ್ಪದ, ಭರತೇಶ ಪಾಟೀಲ, ಬಾಬಣ್ಣ ವಡಕಣ್ಣವರ, ಸತೀಶ ಕಾಡಣ್ಣವರ, ಆಕಾಶ ಸೌದತ್ತಿ, ವಿಶಾಲ ಬಟಗುರ್ಕಿ, ಸಂಗಮೇಶ ಬೆಳವಲಕೊಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು ಹಾಜರಿದ್ದರು.
ಜಿ.ಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡ್ರ ಮಾತನಾಡಿ, ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ಯಡಿಯೂರಪ್ಪನವರ ಸೇವೆ ಅಪಾರವಾಗಿದೆ. ಅವರ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಪಕ್ಷದ ಉತ್ತಮ ಆಡಳಿತಗಾರನಾಗಿ ಅವರು ತಂದ ಯೋಜನೆಗಳು ಜನಪ್ರಿಯವಾಗಿವೆ ಎಂದು ಹೇಳಿದರು.



