ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಹೊಸದಾಗಿ ಕೆ.ಎಸ್.ಆರ್.ಪಿ ಪಡೆಯನ್ನು ಸ್ಥಾಪಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ. ಅಗತ್ಯತೆ ಆಧಾರದ ಮೇಲೆ ರಾಯಚೂರು ಜಿಲ್ಲೆಯಲ್ಲಿ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸಲಾಗುವುದು ಎಂದು ಗೃಹ ಸಚಿವ ಡಾ: ಜಿ.ಪರಮೇಶ್ವರ್ ಅವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ವೇಳೆ ಮಸ್ಕಿ ಕ್ಷೇತ್ರದ ಶಾಸಕ ಬಸನಗೌಡ ತುರುವಿಹಾಳ್ ಇವರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೆ.ಎಸ್.ಆರ್.ಪಿ ಪಡೆ ಅಗತ್ಯವಿದ್ದು, 175 ಎಕರೆ ಜಾಗವನ್ನು ಹಾಗೂ ಕೆ.ಕೆ.ಆರ್.ಡಿ.ಬಿ ಯ ಅನುದಾನವನ್ನು ಸಹ ನೀಡಲಾಗುವುದು ಎಂದು ತಿಳಿಸಿ ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಶಾಸಕರು ಗೃಹ ಸಚಿವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
ಈ ಸಂಬಂಧ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಕೋರಿದರು. ಈ ಸಮಯದಲ್ಲಿ ಉತ್ತರಿಸಿದ ಸಚಿವರು, ರಾಯಚೂರು ಭಾಗದ 30 ಶಾಸಕರು ಸಹಿ ಮಾಡಿ ರಾಯಚೂರು ಭಾಗಕ್ಕೆ ಕೆ.ಎಸ್.ಆರ್.ಪಿ ಪಡೆ ಸ್ಥಾಪಿಸುವಂತೆ ಮನವಿ ಸಲ್ಲಿಸಿರುತ್ತಾರೆ. ಈಗಾಗಲೇ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 12 ಕೆ.ಎಸ್.ಆರ್.ಪಿ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಎಂದು ತಿಳಿಸಿದರು.
ರಾಯಚೂರು ಭಾಗದಲ್ಲಿ ವಿಶ್ವಪ್ರಸಿದ್ದ ಧಾರ್ಮಿಕ ಕ್ಷೇತ್ರಗಳು, ಅಣೆಕಟ್ಟುಗಳು, ಗಡಿಭಾಗಗಳು ಇರುವುದರಿಂದ ಈ ಕುರಿತು ಪರಿಶೀಲಿಸಿ, ಶಾಸಕರುಗಳ ಮನವಿಯನ್ನಾಧರಿಸಿ ಆರ್ಥಿಕ ಇಲಾಖೆಗೆ ಈಗಾಗಲೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಗತ್ಯತೆ ಅನುಸಾರ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕೆ.ಎಸ್.ಆರ್.ಪಿ ಪಡೆ ಸ್ಥಾಪನೆ ಬಗ್ಗೆ ಕ್ರಮ ವಹಿಸಲಾಗುವುದು ಎಂದು ಗೃಹಸಚಿವರು ತಿಳಿಸಿದರು.



