ರಾಮನಗರ: ಜಾಗತಿಕ ಯುದ್ಧದ ಪರಿಣಾಮ ಇಂಧನ ಪೂರೈಕೆಯಲ್ಲಿ ಆತಂಕ ಸೃಷ್ಟಿಯಾದ ಸಂದರ್ಭದಲ್ಲಿ, ಬಿಡದಿ ಭಾಗದ ಕೆಲವು ಗ್ರಾಮಗಳು ಪೈಪ್ಲೈನ್ ಗ್ಯಾಸ್ ವ್ಯವಸ್ಥೆಯ ಮೂಲಕ ಪರ್ಯಾಯ ಮಾದರಿಯನ್ನು ಯಶಸ್ವಿಯಾಗಿ ಅನುಸರಿಸುತ್ತಿವೆ.
ಇರಾನ್–ಇಸ್ರೇಲ್ ಯುದ್ಧದ ಹಿನ್ನೆಲೆ ಗ್ಯಾಸ್ ಸಿಲಿಂಡರ್ಗಳಿಗೆ ಬೇಡಿಕೆ ಹೆಚ್ಚಾಗಿ, ರಾಜ್ಯದ ಹಲವು ಭಾಗಗಳಲ್ಲಿ ಜನರು ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಬಿಡದಿ ಪ್ರದೇಶದ ಸುಮಾರು 10 ಗ್ರಾಮಗಳು ಪೈಪ್ಲೈನ್ ಗ್ಯಾಸ್ ಬಳಕೆಯಿಂದ ಈ ಸಮಸ್ಯೆಯಿಂದ ದೂರ ಉಳಿದಿವೆ.
ಗೈಲ್ ಇಂಡಿಯಾ ಲಿಮಿಟೆಡ್ ಹಾಗೂ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ಮನೆಮನೆಗೆ ಪಿಎನ್ಜಿ ಗ್ಯಾಸ್ ಸಂಪರ್ಕ ನೀಡಲಾಗಿದ್ದು, ದಿನದ 24 ಗಂಟೆಗಳ ನಿರಂತರ ಪೂರೈಕೆ ನಡೆಯುತ್ತಿದೆ.
ಬಿಡದಿ ಭಾಗದಲ್ಲಿ 1,500 ಮನೆಗಳಿಗೆ, ರಾಮನಗರದಲ್ಲಿ 500 ಮನೆಗಳಿಗೆ ಹಾಗೂ ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸಿಲಿಂಡರ್ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದೆ.
ಬೈರಮಂಗಲ ಕ್ರಾಸ್ ಸಮೀಪದ ಗ್ಯಾಸ್ ಸ್ಟೋರೇಜ್ ಘಟಕದಿಂದ ಕೈಗಾರಿಕೆಗಳಿಗೂ ಹಾಗೂ ಮನೆಮನೆಗೂ ಅನಿಲ ಪೂರೈಕೆ ಮಾಡಲಾಗುತ್ತಿದೆ. ಇದು ದೇಶೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲವಾಗಿದ್ದು, ಭವಿಷ್ಯದ ಇಂಧನ ಭದ್ರತೆಗೆ ಇದು ಮಾದರಿಯಾಗುತ್ತಿದೆ.
ಇದೇ ವೇಳೆ ಇನ್ನೂ ಸಂಪರ್ಕ ಪಡೆಯದ ಗ್ರಾಮಗಳಲ್ಲಿ ಸಿಲಿಂಡರ್ ಸಮಸ್ಯೆ ಮುಂದುವರಿದಿರುವುದರಿಂದ ಪೈಪ್ಲೈನ್ ಗ್ಯಾಸ್ಗೆ ಬೇಡಿಕೆ ಹೆಚ್ಚುತ್ತಿದೆ. ಜನರು ತ್ವರಿತವಾಗಿ ಸಂಪರ್ಕ ಕಲ್ಪಿಸುವಂತೆ ಕಂಪನಿಗೆ ಮನವಿ ಮಾಡುತ್ತಿದ್ದಾರೆ.
ಈ ಮಾದರಿ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸಿದರೆ ಇಂಧನ ಸಂಕಷ್ಟವನ್ನು ಸಮರ್ಥವಾಗಿ ಎದುರಿಸಬಹುದೆಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.



