ಬಾಗಲಕೋಟೆ: ಸಿದ್ದರಾಮಯ್ಯ ಅವರ ನಿಜ ಬಣ್ಣ ಮೈಸೂರಿನಲ್ಲಿ ಗೊತ್ತಾಗಿ ಅಲ್ಲಿನ ಮತದಾರರು ಸೋಲಿಸಿದರು. ಆಗ ಬಾದಾಮಿಗೆ ಓಡಿ ಬಂದರು. ಬಾದಾಮಿ ಕೈ ಹಿಡಿಯಿತು. ಆದರೆ ಇಲ್ಲಿಗೂ ಕೈ ಕೊಟ್ಟು ಓಡಿ ಹೋದರು. ಈಗ ಮತ್ತೆ ಬಾಗಲಕೋಟೆಗೆ ಬಂದಿದ್ದಾರೆ. ಇಲ್ಲಿಗೂ ಕೈ ಕೊಡುತ್ತಾರೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ವ್ಯಂಗ್ಯವಾಡಿದರು.
ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಆಗ ಚುನಾವಣೆಗೆ ಬಾದಾಮಿಗೆ ಬಂದಿದ್ದರು. ಈಗ ಮತ್ತೆ ಬಂದಿದ್ದಾರೆ. ಬಾದಾಮಿ ಹಾಲು ಕುಡಿದು, ಬಿರಿಯಾನಿ ತಿಂದು ಟಾಟಾ ಬಾಯ್ ಬಾಯ್ ಹೇಳಿದರು. ಇನ್ನು ಎರಡು ವರ್ಷದಲ್ಲಿ ಅಭಿವೃದ್ಧಿಯ ಮಳೆ ಸುರಿಸುತ್ತೇನೆ ಅಂತ ಅವರು ಹೇಳುತ್ತಿದ್ದಾರೆ.
ಮೂರು ವರ್ಷ ನಿಮ್ಮದೇ ಶಾಸಕರು ಬಾಗಲಕೋಟದಲ್ಲಿ ಇದ್ದರಲ್ಲ. ಆಗ ನಿಮ್ಮ ಶಿಷ್ಯ ಏನು ಅಭಿವೃದ್ಧಿ ಮಾಡಿದ್ರು ಎಂದು ಪ್ರಶ್ನಿಸಿದರು. ಕ್ಷೇತ್ರದಲ್ಲಿ ಈ ಹಿಂದೆ ಚರಂತಿಮಠ ಅವರ ಅಭಿವೃದ್ಧಿ ಕಾರ್ಯ ಜನರ ಮನಸ್ಸಲ್ಲಿ ಉಳಿದಿದೆ. ಆದ್ದರಿಂದ ಈ ಬಾರಿ ಜನರು ಅವರನ್ನು ಗೆಲ್ಲಿಸಲಿದ್ದಾರೆ ಎಂದರು.
ಅಧಿಕಾರಕ್ಕೆ ಬಂದಾಗಿನಿಂದ ಸಿಎಂ ಪಟ್ಟಕ್ಕಾಗಿ ಗುದ್ದಾಟ ನಡೆದಿದೆ. ಮೂರು ವರ್ಷದಲ್ಲಿ 30 ಹಗರಣಗಳನ್ನು ಮಾಡಿದರು. ವಾಲ್ಮೀಕಿ ಹಗರಣದಿಂದ ಹಿಡಿದು ಗುತ್ತಿಗೆದಾರರ ಅರವತ್ತು ಪಸೆರ್ಂಟ್ ಕಮಿಷನ್ ಹಗರಣದವರೆಗೆ ನಡೆಯತ್ತಿವೆ. ಲಿಕ್ಕರ್ ಲಾಬಿ ಮಾಡಿ ಸಚಿವರೊಬ್ಬರು ಕೋಟಿ ಕೋಟಿ ಹಣ ಹೊಡೆದು ದೆಹಲಿಗೆ ಕಳಿಸಿದರು. ಮೂರು ವರ್ಷದಲ್ಲಿ ಯಾವುದೇ ಸಾಧನೆ ಮಾಡಲಿಲ್ಲ. ನೀರಾವರಿಗೆ ಹಣ ಇಡಲಿಲ್ಲ. ಆದರೆ ಕಾಂಗ್ರೆಸ್ನವರು ಮಾತ್ರ ಹಣ ಮಾಡಿಕೊಳ್ಳುತ್ತಿದ್ದಾರೆ. ಒಂದು ಡ್ಯಾಮ್ ಕಟ್ಟಲಿಲ್ಲ. ಮೆಡಿಕಲ್ ಕಾಲೇಜು ತರಲಿಲ್ಲ ಎಂದರು.
ಕಾಂಗ್ರೆಸ್ ಬಂದ ಮೇಲೆ ಒಂದೇ ಒಂದು ಪಿ.ಎಚ್.ಸಿಗಳಲ್ಲಿ ವೈದ್ಯರಿಲ್ಲ. ಔಷಧ ಖರೀದಿಗೆ ಹಣವಿಲ್ಲ. ಹಣವಿಲ್ಲದೆ ಮೂರು ವರ್ಷದಲ್ಲಿ ಟೆಂಡರ್ ಕರೆದಿಲ್ಲ. ಅಭಿವೃದ್ಧಿಗೆ ಮಾಡಿದ ಸಾಲವೇ ಜಾಸ್ತಿ. ಸಾಲ ತಗೊಂಡು ಮಜವಾದಿ ರಾಮಯ್ಯ ಆದರು. ಸಣ್ಣ ಸಣ್ಣ ಸಮುದಾಯಗಳ ಬಳಿ ಹೋಗಿ ಈಗ ಮತ ಕೇಳುತ್ತಿದ್ದಾರೆ. 20 ನೇ ತಾರೀಕಿನ ನಂತರ ಇವರ ಕಥೆ ಏನು ಆಗುತ್ತದೋ ಗೊತ್ತಿಲ್ಲ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸಿಎಂ ಸ್ಥಾನವನ್ನು ಒದ್ದು ಕಿತ್ತುಕೋತಾರೆ ಎಂದು ವಿವರಿಸಿದರು.
ಎಸ್.ಟಿ.ಮುಖಂಡನನ್ನು ಸಿಎಂ ಮಾಡ್ತಿನಿ ಅಂತ ಸಿದ್ದರಾಮಯ್ಯ ಅವರು ಒಂದು ದಿನ ಹೇಳಿಲ್ಲ. ಮುಂದೆ ಹೇಳಲ್ಲ. ಏಕೆಂದರೆ ಅವರ ಸ್ಥಾನವೇ ಗ್ಯಾರಂಟಿ ಇಲ್ಲ. ಮುಖ್ಯಮಂತ್ರಿಯಾಗಲು ಪರಮೇಶ್ವರ್ ಅವರು ಕಾಯುತ್ತಿದ್ದಾರೆ. ಆದರೆ ಅವರ ಭಾಗ್ಯದ ಬಾಗಿಲು ತೆರೆಯುವುದೇ ಡೌಟು ಎಂದರು.



