ಬೆಂಗಳೂರು: ಒಂದನೇ ತರಗತಿ ದಾಖಲಾತಿಗೆ ಸಂಬಂಧಿಸಿದ ವಯೋಮಿತಿಯಲ್ಲಿ ರಾಜ್ಯ ಸರ್ಕಾರ ಮಹತ್ವದ ಸಡಿಲಿಕೆ ನೀಡಿದೆ. 2026–27ನೇ ಶೈಕ್ಷಣಿಕ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಮಕ್ಕಳ ಪ್ರವೇಶಕ್ಕೆ ಇರುವ 6 ವರ್ಷದ ಕಡ್ಡಾಯ ವಯೋಮಿತಿಯಲ್ಲಿ 60 ದಿನಗಳ ವಿನಾಯಿತಿ ಘೋಷಿಸಲಾಗಿದೆ.
ಇದರಿಂದ ಜೂನ್ 1 ರಿಂದ ಜುಲೈ 30ರೊಳಗೆ 6 ವರ್ಷ ತುಂಬುವ ಮಕ್ಕಳಿಗೂ ಒಂದನೇ ತರಗತಿಗೆ ಪ್ರವೇಶ ಪಡೆಯಲು ಅವಕಾಶ ಸಿಗಲಿದೆ. ಅಂದರೆ, ಸುಮಾರು 5 ವರ್ಷ 10 ತಿಂಗಳ ವಯಸ್ಸಿನ ಮಕ್ಕಳನ್ನೂ ಶಾಲೆಗೆ ದಾಖಲಿಸಿಕೊಳ್ಳಬಹುದು.
ಪೋಷಕರಿಂದ ಬಂದಿದ್ದ ಮನವಿಗಳನ್ನು ಪರಿಗಣಿಸಿ, ಕರ್ನಾಟಕ ಶಿಕ್ಷಣ ಅಧಿನಿಯಮ 1983ರ ಕಲಂ 20ರ ಅಡಿಯಲ್ಲಿ ಈ ವಿಶೇಷ ಆದೇಶ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ನೀಡಿದ್ದ ಭರವಸೆಯಂತೆ ಈ ನಿರ್ಧಾರ ಜಾರಿಗೆ ಬಂದಿದೆ.
ಈ ಮೊದಲು 6 ವರ್ಷ ಕಡ್ಡಾಯ ವಯೋಮಿತಿ ನಿಯಮಕ್ಕೆ ಪೋಷಕರಿಂದ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳೂ ನಡೆದಿದ್ದವು. ಇದೀಗ ಸರ್ಕಾರದ ಈ ತೀರ್ಮಾನದಿಂದ ಸಾವಿರಾರು ಮಕ್ಕಳಿಗೆ ಶಾಲಾ ಪ್ರವೇಶದ ಅವಕಾಶ ಸಿಗಲಿದೆ.



